ಎಕ್ಸ್‌ಪ್ರೆಸ್‌ ರೈಲು ನಿಂತರೆ ತಗ್ಗಲಿದೆ ಟ್ರಾಫಿಕ್‌!

ಬೆಂಗಳೂರು:ಸೆ-1: ಬೆಂಗಳೂರು ವಿಭಾಗೀಯ ರೈಲ್ವೆ ಮನಸು ಮಾಡಿದರೆ, ಯಾವುದೇ ಖರ್ಚು-ವೆಚ್ಚ ಹಾಗೂ ಶ್ರಮ ಇಲ್ಲದೆ ತಕ್ಷಣದಿಂದಲೇ ನಿತ್ಯ ನಗರಕ್ಕೆ ನುಗ್ಗುವ ನೂರಾರು ವಾಹನಗಳ ದಟ್ಟಣೆಗೆ ಬ್ರೇಕ್‌ ಹಾಕಬಹುದು. ಆ ಮೂಲಕ ಪ್ರಯಾಣ ಸಮಯದ ಜತೆಗೆ ಆರ್ಥಿಕವಾಗಿಯೂ ಪ್ರಯಾಣಿಕರಿಗೆ ಉಳಿತಾಯ ಮಾಡಿಕೊಡಬಹುದು! ಇದಕ್ಕಾಗಿ ಮಾಡಬೇಕಾದ್ದಿಷ್ಟೇ- ಈಗಾಗಲೇ ನಿರ್ಮಿಸಲು ಉದ್ದೇಶಿಸಿರುವ ಉಪನಗರ ರೈಲು ಯೋಜನೆ ಮಾರ್ಗದಲ್ಲಿ ಬರುವ ನಗರದ ಹೊರವಲಯದಲ್ಲಿರುವ ಕೇವಲ ನಾಲ್ಕೈದು ಪ್ರಮುಖ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರೈಲ್ವೆ ಸಚಿವಾಲಯದ ಮೇಲೆ ಒತ್ತಡ ಹಾಕಬೇಕು.

ವೈಟ್‌ಫೀಲ್ಡ್‌, ಯಲಹಂಕ, ಚನ್ನಸಂದ್ರ, ಚಿಕ್ಕಬಾಣಾವರ, ಕರ್ಮಿಲರಾಂನಂತಹ ನಿಲ್ದಾಣಗಳ ಮೂಲಕ ನಿತ್ಯ 40ಕ್ಕೂ ಹೆಚ್ಚು ಎಕ್ಸ್‌ಪ್ರೆಸ್‌ ರೈಲುಗಳು ಹಾದುಹೋಗುತ್ತವೆ. ಅವುಗಳ ನಿಲುಗಡೆ ಉದ್ದೇಶಿತ ನಿಲ್ದಾಣಗಳಲ್ಲಿ ಕೇವಲ ಎರಡು ನಿಮಿಷ ನಿಂತರೆ ಸಾಕು. ಆಯಾ ಭಾಗದ ಜನ ಅಲ್ಲಿಯೇ ಇಳಿದು, ಕೆಲಸಕ್ಕೆ ಅಥವಾ ಮನೆಗಳಿಗೆ ತೆರಳುತ್ತಾರೆ. ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಥವಾ ಯಶವಂತಪುರ ನಿಲ್ದಾಣಕ್ಕೆ ಬಂದು, ಪುನಃ ತಮ್ಮ ಮನೆ ಅಥವಾ ಕೆಲಸ ಮಾಡುವ ಜಾಗಕ್ಕೆ ಹೋಗುವುದು ತಪ್ಪುತ್ತದೆ. ಅದರಲ್ಲೂ “ಪೀಕ್‌ ಅವರ್‌’ನಲ್ಲಿ ನೂರಾರು ವಾಹನಗಳು ನಗರಕ್ಕೆ ನುಗ್ಗುವುದು ತಪ್ಪುತ್ತದೆ.

ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 161 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಯು ಅನುಮೋದನೆಗೊಂಡ ದಿನದಿಂದ ಐದು ವರ್ಷಕ್ಕೆ ಪೂರ್ಣಗೊಳಿಸುವ ಗುರಿ ಇದೆ. ಅಂದರೆ ಕನಿಷ್ಠ 2025ಕ್ಕೆ ಈ ಸೇವೆ ಬೆಂಗಳೂರಿಗರಿಗೆ ಲಭ್ಯವಾಗುತ್ತದೆ. ಇನ್ನು “ನಮ್ಮ ಮೆಟ್ರೋ’ ಈ ಮಾರ್ಗಗಳಲ್ಲಿ ಬರುವುದು ಕೂಡ ಹಲವು ವರ್ಷಗಳಾಗುತ್ತದೆ (ಕೆಲವೆಡೆ ಮೆಟ್ರೋ ಬರುವುದೇ ಇಲ್ಲ). ಈ ಮಧ್ಯೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ತಕ್ಷಣದ ತಾತ್ಕಾಲಿಕ ಪರಿಹಾರ ಸಾಧ್ಯವಿದೆ. ಇದಕ್ಕೆ ರೈಲ್ವೆ ಅಧಿಕಾರಿಗಳು ಮನಸ್ಸು ಮಾಡಬೇಕು. ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಕೂಡ ಒತ್ತಡ ತರಬೇಕು ಎಂದು ಪ್ರಜಾ ರಾಗ್‌ ಸಂಸ್ಥೆಯ ಹಾಗೂ ಉಪನಗರ ರೈಲು ಯೋಜನೆ ಹೋರಾಟಗಾರ ಸಂಜೀವ ದ್ಯಾಮಣ್ಣವರ ಒತ್ತಾಯಿಸುತ್ತಾರೆ.

ಈಗಾಗುತ್ತಿರುವುದು ಏನು?: ಬಹುತೇಕ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳು ಹೊರಡುವುದು ಮೆಜೆಸ್ಟಿಕ್‌ ಅಥವಾ ಯಶವಂತಪುರದಿಂದ. ಯಲಹಂಕ, ವೈಟ್‌ಫೀಲ್ಡ್‌ನಂತಹ ಪ್ರಮುಖ ನಿಲ್ದಾಣಗಳು ಇರುವುದು ನಗರದ ಕೇಂದ್ರ ಭಾಗದಿಂದ ಸುಮಾರು 12-15 ಕಿ.ಮೀ. ದೂರ. ಪ್ರಯಾಣಿಕರು ಈ ರೈಲುಗಳನ್ನು ಏರಲು ಆಟೋ, ಕ್ಯಾಬ್‌, ಸ್ವಂತ ವಾಹನ, ಬಸ್‌ಗಳನ್ನು ಅವಲಂಬಿಸಿದ್ದಾರೆ. ರೈಲು ಹೊರಡುವ ಒಂದು ತಾಸು ಮೊದಲೇ ಮನೆ ಬಿಡಬೇಕು. ಸಾಮಾನ್ಯವಾಗಿ ಒಂದು ಎಕ್ಸ್‌ಪ್ರೆಸ್‌ ರೈಲು ಸಿಟಿ ರೈಲು ನಿಲ್ದಾಣಕ್ಕೆ ಬಂದು ನಿಂತರೆ, ಸುಮಾರು 1,000- 1,500 ಜನ ಅದರಿಂದ ಇಳಿಯುತ್ತಾರೆ. ಕನಿಷ್ಠ 200-300 ವಾಹನಗಳು ಆ ಪ್ರಯಾಣಿಕರಿಗಾಗಿ ಧಾವಿಸುತ್ತವೆ.

ಹಾಗೊಂದು ವೇಳೆ ಈ ಪ್ರಯಾಣಿಕರ ಪೈಕಿ ಶೇ. 20-30ರಷ್ಟು ಜನ ಹೊರವಲಯದಲ್ಲಿರುವ ನಿಲ್ದಾಣಗಳಲ್ಲೇ ಇಳಿದರೆ, ಪ್ರತಿ ರೈಲಿಗೆ 50ರಿಂದ 60 ವಾಹನಗಳ ದಟ್ಟಣೆ ತಪ್ಪಿಸಬಹುದು. ಐದರಿಂದ ಆರು ನಿಲ್ದಾಣಗಳೂ ಸೇರಿದರೆ, ಹೆಚ್ಚು-ಕಡಿಮೆ 300ರಿಂದ 400 ವಾಹನಗಳದಟ್ಟಣೆಯನ್ನು ಅನಾಯಾಸವಾಗಿ ಕಡಿಮೆ ಮಾಡಬಹುದು. ಅಲ್ಲದೆ, ಪ್ರಯಾಣಿಕರ ಆಗಮನದ ಸಮಯವೂ ತಗ್ಗುತ್ತದೆ. ಪೆಟ್ರೋಲ್‌, ಡೀಸೆಲ್‌ ಉಳಿತಾಯದೊಂದಿಗೆ ವಾಯುಮಾಲಿನ್ಯ ತಗ್ಗಿಸುವಲ್ಲಿಯೂ ಪರೋಕ್ಷವಾಗಿ ನೈರುತ್ಯ ರೈಲ್ವೆ ಕೈಜೋಡಿಸಿದಂತಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಫ‌ಲ ನೀಡಿದೆ ಕೆಂಗೇರಿ ನಿಲುಗಡೆ: ಕೆಂಗೇರಿಯಲ್ಲಿ ಈ ಪ್ರಯೋಗ ಫ‌ಲ ನೀಡಿದೆ ಎಂದು ಸ್ವತಃ ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿಗಳು ತಿಳಿಸುತ್ತಾರೆ. ಕೆಂಗೇರಿ ಮೂಲಕ ಬರುವ ನಗರಕ್ಕೆ ಬರುವ ಬಹುತೇಕ ಎಲ್ಲ ಎಕ್ಸ್‌ಪ್ರೆಸ್‌ ರೈಲುಗಳು ಅಲ್ಲಿ ನಿಲುಗಡೆ ಆಗುತ್ತವೆ. ಇದರಿಂದ ಸುತ್ತಲಿನ ನೂರಾರು ಪ್ರಯಾಣಿಕರು ಅಲ್ಲಿಯೇ ಇಳಿಯುತ್ತಾರೆ. ಅದೇ ರೀತಿ, ಸಿಟಿ ರೈಲು ನಿಲ್ದಾಣದಿಂದ ಕೆಂಗೇರಿಗೆ ಹೋಗುವವರ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ. ಪರಿಣಾಮ ರೈಲ್ವೆಗೆ ಆದಾಯ ಹರಿದುಬರುತ್ತಿದೆ. ಈ ಪ್ರಯೋಗವನ್ನು ಇತರ ಪ್ರಮುಖ ನಿಲ್ದಾಣಗಳಲ್ಲೂ ಮಾಡಲು ಸಾಧ್ಯವಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಆದರೆ, ಎಕ್ಸ್‌ಪ್ರೆಸ್‌ ರೈಲುಗಳನ್ನು ನಗರದ ಸುತ್ತಲಿನ 50-60 ಕಿ.ಮೀ. ವ್ಯಾಪ್ತಿಯಲ್ಲಿ ನಿಲುಗಡೆ ಮಾಡಬಾರದು ಎಂದು ಅಧಿಕಾರಿಗಳು ಅಲಿಖೀತ ನಿಯಮವನ್ನು ಹಾಕಿಕೊಂಡಿದ್ದಾರೆ. ಆದರೆ ಮುಂಬೈ, ಹುಬ್ಬಳ್ಳಿಯ ಪ್ರಮುಖ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಲಾಗುತ್ತಿದೆ. ಅದರಿಂದ ಸಾಕಷ್ಟು ಅನುಕೂಲವೂ ಆಗುತ್ತಿದೆ ಎಂದು ರೈಲ್ವೆ ಹೋರಾಟಗಾರರು ತಿಳಿಸುತ್ತಾರೆ.

ಕೆಲವೆಡೆ ಪ್ರಸ್ತಾವನೆ: ಹೊರವಲಯದಲ್ಲಿರುವ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಹಳಿಗಳ ಡಬ್ಲಿಂಗ್‌, ಪ್ಲಾಟ್‌ಫಾರಂ ವಿಸ್ತರಣೆ ಕೂಡ ಮಾಡಲಾಗಿದೆ. ಆದರೆ, ರೈಲುಗಳು ಮಾತ್ರ ಆ ಭಾಗಗಳಲ್ಲಿ ನಿಲ್ಲುತ್ತಿಲ್ಲ ಎಂದು ಸಂಜೀವ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸುತ್ತಾರೆ.

ಉದಾಹರಣೆಗೆ ಬೈಯಪ್ಪನಹಳ್ಳಿ ಪ್ಲಾಟ್‌ಫಾರಂನಲ್ಲಿ ಬೋಗಿಗಳ ನಿಲುಗಡೆ ಸಾಮರ್ಥ್ಯವನ್ನು 18ರಿಂದ 24 ಬೋಗಿಗಳಿಗೆ ವಿಸ್ತರಿಸಲಾಗಿದೆ. ಅದೇ ರೀತಿ, ಚನ್ನಸಂದ್ರದಲ್ಲಿ ಡಬ್ಲಿಂಗ್‌ ಕಾರ್ಯ ಆಗಿದೆ. ಪಾದಚಾರಿಗಳ ಎತ್ತರಿಸಿದ ಮಾರ್ಗವೂ ನಿರ್ಮಿಸಲಾಗಿದೆ. ಹೊರವರ್ತುಲ ರಸ್ತೆಗೆ ಇದು ಸಮೀಪದಲ್ಲೇ ಇರುವುದರಿಂದ ರೈಲುಗಳ ನಿಲುಗಡೆ ಇಲ್ಲಿ ಹೆಚ್ಚು ಅಗತ್ಯವಿದೆ. ಯಲಹಂಕದಲ್ಲಿ ಬೇಡಿಕೆ ಇದೆ. ಪ್ರಸ್ತಾವನೆ ಸಲ್ಲಿಸಿಲ್ಲ. ಕರ್ಮಿಲರಾಂ ನಿಲ್ದಾಣ ಅಭಿವೃದ್ಧಿಪಡಿಸುವ ಅಗತ್ಯವಿದೆ. ಆದರೆ, ಈ ನಿಟ್ಟಿನಲ್ಲಿ ಕೆಲಸ ಆಗುತ್ತಿಲ್ಲ ಎಂದು ಅವರು ವಿವರಿಸಿದರು.

8 ನಿಮಿಷ ವ್ಯಯ: ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಯಿಂದ ಅಬ್ಬಬ್ಟಾ ಎಂದರೆ 8 ನಿಮಿಷ ವ್ಯಯ ಆಗುತ್ತದೆ. ಒಂದು ರೈಲು 2 ನಿಮಿಷ ನಿಲುಗಡೆಯಾಗಿ, ಮತ್ತೆ ತನ್ನ ಹಿಂದಿನ ವೇಗ ಪಡೆದು ಸಂಚರಿಸಲು ತೆಗೆದುಕೊಳ್ಳುವ ಸಮಯವೂ ಇದರಲ್ಲಿ ಸೇರಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಎಕ್ಸ್‌ಪ್ರೆಸ್‌ ರೈಲುಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಲು ಬರುವುದಿಲ್ಲ. ಆದಾಗ್ಯೂ ಪ್ರಯಾಣಿಕರ ಹಿತದೃಷ್ಟಿಯಿಂದ ಹಾಗೂ ನಗರದ ಸಂಚಾರದಟ್ಟಣೆಯನ್ನು ಪರಿಗಣಿಸಿ ಈ ನಿಟ್ಟಿನಲ್ಲಿ ಚಿಂತನೆ ನಡೆಸಬಹುದಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಶೀಘ್ರ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸುರೇಶ್‌ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

ಒಂದು ನಿಲುಗಡೆಯಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗುವುದಾದರೆ ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮಾಡುವುದರಲ್ಲಿ ತಪ್ಪೇನಿಲ್ಲ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಬಗ್ಗೆ ಸಚಿವರ ಗಮನಕ್ಕೂ ತರಲಾಗುವುದು.
-ಡಾ.ಸಿ.ಎನ್‌.ಅಶ್ವತ್ಥನಾರಾಯಾಣ, ಡಿಸಿಎಂ
ಕೃಪೆ:ಉದಯವಾಣಿ

ಎಕ್ಸ್‌ಪ್ರೆಸ್‌ ರೈಲು ನಿಂತರೆ ತಗ್ಗಲಿದೆ ಟ್ರಾಫಿಕ್‌!

express-train-is-stopped-in-turn-reduces-traffic