ಅಚ್ಚರಿ ಬೆಳವಣಿಗೆಯಲ್ಲಿ ದೇವೇಗೌಡ ಬೀಗರಾದ ಪ್ರೊ.ಕೆ.ಎಸ್.ರಂಗಪ್ಪ ನಿವಾಸಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಮೈಸೂರು, ಸೆಪ್ಟೆಂಬರ್ 16, 2019 (www.justkannada.in): ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದ್ದರು.

ಇಂದು ಬೆಳಗ್ಗೆ ಮೈಸೂರಿನ ಬೋಗಾದಿಯಲ್ಲಿರುವ ರಂಗಪ್ಪ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಉಪಹಾರ ಸೇವಿಸಿದರು.

ಈ ಕುರಿತು ಮಾತನಾಡಿದ ಪ್ರೊ.ಕೆ.ಎಸ್.ರಂಗಪ್ಪ ಅವರು, ಸಿದ್ದರಾಮಯ್ಯ ನಮ್ಮ ಮನೆಗೆ ಬಂದಿದ್ದು ಸೌಜನ್ಯದ ಭೇಟಿ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು. 1980ರಿಂದಲೂ ಸಿದ್ದರಾಮಯ್ಯ ಹಾಗೂ ನನ್ನ ಸ್ನೇಹ ಇದೆ. ನಾನು ಕುಲಪತಿಯಾಗಿದ್ದ ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ವಿವಿ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು.

ಸಾಕಷ್ಟು ಬಾರಿ ಅವರನ್ನು ನಾನು ಮನೆಗೆ ಆಹ್ವಾನಿಸಿದ್ದೆ. ಆದರೆ ಅವರು ಭೇಟಿ ನೀಡಲು ಸಾಧ್ಯವಾಗಿರಲ್ಲ. ನಿನ್ನೆ ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮತ್ತೆ ಆಹ್ವಾನ ನೀಡಿದ್ದೆ. ಹೀಗಾಗಿ ಅವರು ಇಂದು ಬೆಳಗ್ಗೆ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು ಎಂದು ಹೇಳಿದೆರು.