ಯುವ ದಸರಾ ವೇದಿಕೆಯಲ್ಲೇ ಎಂಗೇಜ್ ಮೆಂಟ್ ವಿಚಾರ: ಕ್ಷಮೆ ಕೇಳಿದ ಚಂದನ್ ಶೆಟ್ಟಿ…

ಮೈಸೂರು,ಅ,5,2019(www.justkannada.in):  ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಯುವ ದಸರಾ ವೇದಿಕೆಯಲ್ಲೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಈ ಬಗ್ಗೆ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಕ್ಷಮೆ ಕೋರಿದ್ದಾರೆ.

ನಿನ್ನೆ ನಡೆದ ಯುವದಸರಾ ವೇದಿಕೆಯುಲ್ಲೇ ಚಂದನ್ ಶೆಟ್ಟಿ, ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ ರಿಂಗ್ ತೊಡಿಸಿ ಪ್ರಪೋಸ್  ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಈ ಬಗ್ಗೆ  ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ. ನಮ್ಮ ಮದುವೆ ವಿಚಾರವನ್ನ ಜನರಿಗೆ ತಿಳಿಸಲು ಹಾಗೇ ಮಾಡಿದೆ. ಅದು ನನಗೆ ತಪ್ಪು ಅಂತ ಗೊತ್ತಾಗಲಿಲ್ಲ. ಇದು ನನ್ನ ವೈಯುಕ್ತಿಕ ನಿರ್ಧಾರ ಆಗಿತ್ತು. ಈ ಬಗ್ಗೆ ನಾನು ಯಾರಿಗು ಮಾಹಿತಿ ನೀಡಿರಲಿಲ್ಲ. ಯುವದಸರಾ ಉಪಸಮಿತಿ ಅನುಮತಿಯನ್ನು ಕೇಳಿರಲಿಲ್ಲ ಎಂದು ಹೇಳಿದ್ದಾರೆ.

ನಾವು ಮಾಡಿದ್ದು ಎಂಟರ್ಟೈನ್ಮೆಂಟ್‌ಗಾಗಿ. ನಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಹಾಗೂ ಜನರಿಗೆ ನಮ್ಮ ಮದುವೆ ವಿಷಯ ತಿಳಿಸಲು ಆ ರೀತಿ ಮಾಡಿದ್ವಿ. ಅದು ಎಂಗೇಜ್ಮೆಂಟ್ ಅಲ್ಲ ಜಸ್ಟ್ ಪ್ರಪೋಸ್. ನಿವೇದಿತಾ ನನಗೆ ರಿಂಗ್ ಹಾಕಿದ್ದರೆ ಅದು ಎಂಗೇಜ್ಮೆಂಟ್ ಆಗ್ತಿತ್ತು. ಆದ್ರೆ ನಾನು ಮಾತ್ರ ಅವಳಿಗೆ ರಿಂಗ್ ಹಾಕಿದೆ. ಅದು ತಪ್ಪು ಅಂತ ನನಗೆ ಅನ್ನಿಸಿಲ್ಲ. ಹಾಗೇನಾದ್ರು ತಪ್ಪಾಗಿದ್ರೆ ಕ್ಷಮೆ ಕೇಳ್ತಿನಿ ಎಂದು ಚಂದನ್ ಶೆಟ್ಟಿ ಕ್ಷಮೆ ಕೋರಿದ್ದಾರೆ.

ಸರ್ಕಾರಿ ವೇದಿಕೆಯಲ್ಲಿ ವೈಯುಕ್ತಿಕ ವಿಚಾರ ಪ್ರಸ್ತಾಪ ಮಾಡಬಾರದು ಅಂತ ನನಗೆ ಗೊತ್ತಿರಲಿಲ್ಲ. ನನ್ನಿಂದ ತಪ್ಪಾಗಿದೆ‌. ಇದಕ್ಕೆ ಸರ್ಕಾರ ಯಾರನ್ನು ಹೊಣೆ ಮಾಡಬೇಡಿ. ಇದರ ಸಂಪೂರ್ಣ ಹೊಣೆಯನ್ನ ನಾನೇ ಹೊರುತ್ತೇನೆ. ಇನ್ನು ನೋಟಿಸ್ ಕೊಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದರು.

Key words: Engagement –yuvadasara- stage- Chandan Shetty- apologizes-mysore