ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಡಾ. ಕೆ.ವಿ ರಾಜೆಂದ್ರ ಅಧಿಕಾರ ಸ್ವೀಕಾರ.

ಮೈಸೂರು,ಅಕ್ಟೋಬರ್,27,2022(www.justkannada.in):  ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ ಕೆ ವಿ ರಾಜೆಂದ್ರ ಅಧಿಕಾರ ಸ್ವೀಕರಿಸಿದರು.

ಡಾ ಬಗಾದಿ ಗೌತಮ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಿತ್ತು. ಇಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಜೇಂದ್ರ ಅವರನ್ನು ನಿರ್ಗಮಿತ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ವಾಗತಿಸಿದರು. ಬಳಿಕ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರಿಸಿದರು.

ನೂತನ ಜಿಲ್ಲಾಧಿಕಾರಿಯಾಗಿ ಕಡತಗಳಿಗೆ ಸಹಿ ಹಾಕಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಕೆ.ವಿ ರಾಜೇಂದ್ರ, ಸರ್ಕಾರ ನನ್ನ ಸಾಮರ್ಥ್ಯ ನೋಡಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎಂದರೆ ಸಾರ್ವಜನಿಕರಿಗೆ ಸದಾ ತೆರೆದಿರಬೇಕು. ಅಂತಹ ಆಡಳಿತ ನೀಡಲು ಇಷ್ಟಪಡುತ್ತೇನೆ. ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯದೇ, ತಾಲೂಕು ಮಟ್ಟದಲ್ಲೇ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಈ ವೇಳೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಮುಡಾ ಆಯುಕ್ತ ದಿನೇಶ್‌ ಕುಮಾರ್ ಹಾಜರಿದ್ದರು.

Key words: Dr. KV Rajendra – new –DC-Mysore.