ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್‌ ಗೆ ಬರುವುದಾದರೆ ಸ್ವಾಗತ- ಅಚ್ಚರಿ ಹೇಳಿಕೆ ನೀಡಿದ ‘ಕೈ’ ಶಾಸಕ ತನ್ವೀರ್ ಸೇಠ್..

ಮೈಸೂರು,ನ,1,2019(www.justkannada.in): ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್,  ನಮ್ಮ ಪಕ್ಷದ ಶಾಸಕರನ್ನು ಬಿಜೆಪಿಯವರು ಕರೆದುಕೊಂಡು ಹೋದರು. ತಿಂಗಳಾನುಗಟ್ಟಲೇ ಮುಂಬೈನಲ್ಲಿ ಇಟ್ಟುಕೊಂಡಿದ್ದರು. ಆಗಲೇ ನಮ್ಮ ಮತ್ತು ಅನರ್ಹ ಶಾಸಕರ ಸಂಬಂಧ ಮುಗಿದು ಹೋಯ್ತು. ಈಗ ಅವರಿಗೆ ಅವಕಾಶ ನೀಡುವ ಬಗ್ಗೆ ಬಿಜೆಪಿ ನಾಯಕರಲ್ಲೇ ಗೊಂದಲವಿದೆ. ಅನರ್ಹ ಶಾಸಕರನ್ನು ಸೇರಿಸಿಕೊಳ್ಳಲು ನಾನ್ಯಾರು ?  ಆದರೆ ಅನರ್ಹ ಶಾಸಕರೇ ಕಾಂಗ್ರೆಸ್‌ಗೆ ಬರಲು ಮುಂದಾದರೆ ನಮ್ಮ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಪಕ್ಷ ಅನರ್ಹರನ್ನು ಮತ್ತೆ ಸೇರಿಸಿಕೊಳ್ಳಲು ನಿರ್ಧರಿಸಿದರೆ ನಾನು ಸ್ವಾಗತಿಸುತ್ತೇನೆ ಎಂದು ಹೇಳಿಕೆ ನೀಡಿದರು.

ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಬಿಜೆಪಿಯವರು ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದರು.  ಈಗ ಯಡಿಯೂರಪ್ಪ ಅವರೇ ನಾನು ಸಿಎಂ ಆಗಿದ್ದು ಅಪರಾಧವಾಯಿತು ಅಂತ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಪ್ರಬಲ ನಾಯಕರಾಗಿದ್ದವರು.  ಈಗ ಅಸಹಾಯಕರಾಗಿ ಮಾತನಾಡುತ್ತಿದ್ದಾರೆ. ಅವರ ಪಕ್ಷದವರು, ಸಚಿವರು ಸಹಕಾರ ನೀಡುತ್ತಿಲ್ಲ ಎಂಬುದು ನಮಗೆ ಸಂಬಂಧಪಟ್ಟ ವಿಚಾರ ಅಲ್ಲ. ಆದರೆ ಯಡಿಯೂರಪ್ಪ ಪಕ್ಷದ ಮುಖ್ಯಮಂತ್ರಿ ಅಲ್ಲ, ರಾಜ್ಯದ ಮುಖ್ಯಮಂತ್ರಿ. ಹೀಗಾಗಿ  ಬಿಎಸ್ ಯಡಿಯೂರಪ್ಪ ಅಧಿಕಾರ ನಡೆಸಲು ಆಗದಿದ್ದರೇ ಬಿಟ್ಟು ಹೋಗಲಿ ಎಂದು ಆಗ್ರಹಿಸಿದರು.

Key words: disqualified MLA- come back –Congress- welcome-Congress leader- Tanveer Seth