ದೆಹಲಿ ಗಲಭೆ ವಿಚಾರ: ಸರ್ವಶಕ್ತ ಗೃಹ ಸಚಿವ ಅಮಿತ್ ಶಾ ಕಣ್ಮುಚ್ಚಿ ಕುಳಿತಿರುವುದೇ ಗಲಭೆಗೆ ಕಾರಣ- ಟ್ವಿಟ್ಟರ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ…

ಬೆಂಗಳೂರು,ಫೆ,25,2020(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಪರ ಮತ್ತು ವಿರೋಧ ವಿಚಾರವಾಗಿ ದೆಹಲಿಯಲ್ಲಿ ಗಲಭೆ ನಡೆದು ಹಿಂಸಾಚಾರಕ್ಕೆ ತಿರುಗಿದೆ. ಈವರೆಗೆ ಹಿಂಸಾಚಾರದಲ್ಲಿ 9ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಸರ್ವ ಶಕ್ತ ಗೃಹ ಸಚಿವ ಅಮಿತ್ ಶಾ ಕಣ್ಮುಚ್ಚಿ ಕೂತಿರುವುದೇ ಗಲಭೆಗೆ ಕಾರಣ ಎಂದು ಆರೋಪಿಸಿದ್ದಾರೆ. ಏಳುಜೀವಗಳನ್ನು ಬಲಿ ತೆಗೆದುಕೊಂಡ ದೆಹಲಿ ಗಲಭೆ ಅತ್ಯಂತ ಖೇದಕರವಾದರೂ ಅನಿರೀಕ್ಷಿತವೇನಲ್ಲ. ಬಿಜೆಪಿಯ ಸಚಿವರು, ಶಾಸಕರು ಬಹಿರಂಗವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾಗಲೂ ಅಮಿತ್ ಶಾ ಕಣ್ಣು ಮುಚ್ಚಿ ಕುಳಿತಿರುವುದೇ ಗಲಭೆಗೆ ಕಾರಣ ಎಂದು ಟ್ವಿಟ್ ಮಾಡಿದ್ದಾರೆ.

ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿರುವ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ತಕ್ಷಣ ಬಂಧಿಸಬೇಕು. ಗಲಭೆ ಗ್ರಸ್ತ ಪ್ರದೇಶಕ್ಕೆ ಅವಶ್ಯಕ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ ಭೀತಿಗ್ರಸ್ತ ಜನರಲ್ಲಿ ವಿಶ್ವಾಸ ತುಂಬಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Key words: Delhi riots-central Home Minister -Amit Shah – Former CM Siddaramaiah- criticized