ಖಾಕಿ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಖಡಕ್ ಪೊಲೀಸ್ ಅಧಿಕಾರಿ ಡಿಸಿಪಿ ಅಣ್ಣಾಮಲೈ?

ಬೆಂಗಳೂರು:ಮೇ-28:(www.justkannada.in) ಕರ್ನಾಟಕದ ‘ಸಿಂಗಂ’ ಎಂದೇ ಹೆಸರಾಗಿರುವ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಪೊಲೀಸ್ ಇಲಾಖೆ ತೊರೆಯಲಿದ್ದಾರೆ. ಅಣ್ಣಾಮಲೈ ಖಾಕಿ ಕಳಚಿ ಖಾದಿ ತೊಡುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಅಚ್ಚರಿ ಎನಿಸಿದರೂ ಇದು ನಿಜ. ಬೆಂಗ್ಳೂರು ದಕ್ಷಿಣ ವಿಭಾಗದ ಡಿಸಿಪಿ(ಕ್ರೈಂ)ಯಾಗಿ ಕಾರ್ಯನಿರ್ವಹಿಸುತ್ತಿರುವ ಖಡಕ್ ಪೊಲೀಸ್ ಆಫಿಸರ್ ಆಗಿರುವ ಅಣ್ಣಾಮಲೈ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರು ರ್ಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಅಣ್ಣಾಮಲೈ ಇಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಈ ವಿಚಾರದ ಕುರಿತಾಗಿ ಚರ್ಚೆ ನಡೆಸಲಿದ್ದಾರೆ.

ತವರು ಜಿಲ್ಲೆ ತಮಿಳುನಾಡಿಗೆ ತೆರಳಲಿರುವ ಅಣ್ಣಾಮಲೈ, ಅಲ್ಲಿಂದಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಣ್ಣಾಮಲೈ ಅವರು ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ. ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಆದರೆ ತನ್ನ ರಾಜಕೀಯ ಪ್ರವೇಶದ ಕುರಿತಾಗಿ ಮತ್ತು ಪೊಲೀಸ್ ಇಲಾಖೆಯನ್ನು ತೊರೆಯುವ ಕುರಿತಾಗಿ ಅಣ್ಣಾಮಲೈ ಅವರು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಖಾಕಿ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಖಡಕ್ ಪೊಲೀಸ್ ಅಧಿಕಾರಿ ಡಿಸಿಪಿ ಅಣ್ಣಾಮಲೈ?

DCP Annamalai Decides To Resign & Join Politics