ಕಾಂಗ್ರೆಸ್ ನವರು ಇಷ್ಟು ದಿನ ಕತ್ತೆ ಕಾಯ್ತಿದ್ರಾ..? ಉಚಿತ ಘೋಷಣೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.

ಹುಬ್ಬಳ್ಳಿ,ಫೆಬ್ರವರಿ,24,2023(www.justkannada.in):  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುವುದಾಗಿ ಮಾಡಿರುವ ಘೋಷಣೆ ಬಗ್ಗೆ ಕಿಡಿಕಾರಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳ ಕಾಲ ಕತ್ತೆ ಕಾಯ್ತಾ ಇತ್ತಾ? ಕಾಂಗ್ರೆಸ್ ನವರು ಹೇಳೋದು ಬರೀ ಸುಳ್ಳು. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸಿಮರು ಎಂದು ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ನಾವು ಈಗಾಗಲೇ ಉಚಿತವಾಗಿ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಾವು 10 ಕೆಜಿ ಕೊಟ್ಟರೆ ಕಾಂಗ್ರೆಸ್ ​ನವರು 20 ಕೆಜಿ ಅಂತಾರೆ. ಕಾಂಗ್ರೆಸ್‌ ನವರು ಹೇಳಿದ್ದನ್ನು ಯಾವುದಾದರೂ ಮಾಡಿದ್ದಾರಾ . ಇದೇ ಕಾಂಗ್ರೆಸ್​ ನವರು ಮೊದಲು ಗರೀಬಿ ಹಠಾವೋ ಅಂದರು. ಅದೆಲ್ಲ ಆಗಿದ್ದರೆ ಇವತ್ತೇಕೆ ಮತ್ತೆ ಅಕ್ಕಿ ಕೊಡುವ ಸ್ಥಿತಿ ಬರುತ್ತಿತ್ತು? ಎಂದು ಪ್ರಶ್ನಿಸಿದರು.

ದೇಶದಲ್ಲಿ ಕಾಂಗ್ರೆಸ್​ ಪಕ್ಷ 57-58 ವರ್ಷ ಆಡಳಿತ ಮಾಡಿದ್ದಾರೆ. ಈಗಲೂ ವಿದ್ಯುತ್ ಕೊಡುತ್ತೇವೆ ಅಂತಾ ಕಾಂಗ್ರೆಸ್​ ಹೇಳುತ್ತದೆ. ಈಗ ನಾವು 24 ಗಂಟೆಗಳ ಕಾಲ ವಿದ್ಯುತ್ ಕೊಡುತ್ತಿದ್ದೇವೆ. ಕಾಂಗ್ರೆಸ್ ​ನವರು ಈಗ ಉಚಿತ ವಿದ್ಯುತ್ ಕೊಡುತ್ತೇವೆ ಅಂತಾರೆ. ಇಷ್ಟು ದಿನ ಕಾಂಗ್ರೆಸ್‌ ನವರು ಕತ್ತೆ ಕಾಯ್ತಾ ಇದ್ರಾ? ಸುಳ್ಳು ಹೇಳುವುದು ಕಾಂಗ್ರೆಸ್‌ ನವರ ಡಿಎನ್‌ ಎನಲ್ಲೇ ಇದೆ ಎಂದು  ಹರಿಹಾಯ್ದರು.

ಬಿಎಸ್ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ ಬಗ್ಗೆ  ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಯಡಿಯೂರಪ್ಪ ನಮ್ಮ ನಾಯಕರು, ಜನಪ್ರಿಯ ನಾಯಕರು. ಪಕ್ಷಕ್ಕಾಗಿ ಕಾರ್ಯನಿರ್ವಹಿಸುತ್ತೇನೆ ಅಂತ ಅವರೇ ಹೇಳಿದ್ದಾರೆ. ಅವರನ್ನ ಸದಾ ಕಾಲ ಉಪಯೋಗ ಮಾಡಿಕೊಳ್ಳುತ್ತೇವೆ. ಅವರು ಎಷ್ಟು ದಿನ ಓಡಾಡುವ ಶಕ್ತಿ ಇದೆಯೋ ಓಡಾದಲಿ, ಅವರಿಗೆ ದೇವರು ಆ ಶಕ್ತಿ ಕೊಡಲಿ ಎಂದು ಶುಭ ಹಾರೈಸಿದರು.

Key words:  Congress – free –announcement- Union Minister -Prahlad Joshi