ಅವಕಾಶಗಳಿಂದ ವಂಚಿತ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಅಕ್ಟೋಬರ್,3,2021(www.justkannada.in): ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅತಿ ಅಗತ್ಯ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಇಂದು ಆಯೋಜಿಸಿದ್ದ ಗಾಣಿಗ ಸಮುದಾಯದ ಕಾರ್ಯಾಗಾರವನ್ನು ಮಾಜಿ  ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅತಿ ಅಗತ್ಯ. ಶತಮಾನಗಳ ಹಿಂದೆ ವ್ಯಕ್ತಿಯ ಕಾಯಕದ ಆಧಾರದ ಮೇಲೆ ಜಾತಿ ನಿರ್ಮಾಣ ಮಾಡಲಾಗಿದೆ. ಈ ಚತುರ್ವರ್ಣ ವ್ಯವಸ್ಥೆ ನಮ್ಮ ನಡುವೆ ಇನ್ನೂ ಜೀವಂತವಾಗಿದೆ.

ಇಂದು ಶೋಷಿತ ಸಮುದಾಯಗಳು ಶಿಕ್ಷಣ ಪಡೆದಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಮಾತನಾಡುವ ಧೈರ್ಯ ಬಂದಿದೆ. ಇಂತಹ ವ್ಯವಸ್ಥೆ ಹಿಂದೆ ಇರಲಿಲ್ಲ. ಕೆಲವರು ಜಾತಿ ಸಮ್ಮೇಳನಗಳನ್ನು ಮಾಡೋದು ತಪ್ಪು ಎನ್ನುತ್ತಾರೆ. ಮುಂದೆ ತಮ್ಮ ವಿರುದ್ಧವೇ ಧ್ವನಿ ಎತ್ತಬಹುದು ಎಂಬ ಹತಾಶೆ ಇದಕ್ಕೆ ಕಾರಣ.

ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಅದು ಜಾತೀಯತೆಯಾಗಲ್ಲ, ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಆಗುತ್ತದೆ ಎಂದು ಲೋಹಿಯಾ ಹೇಳಿದ್ದರು.

ನನ್ನ ತಂದೆ, ತಾಯಿ ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಕಾನೂನು ಪದವಿ ಗಳಿಸಿದ್ದಕ್ಕೆ ಇಂದು ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗಿದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.

“ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಮೂರು ಸೂತ್ರಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗದ ಜನರಿಗೆ ನೀಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ. ಸಂವಿಧಾನವು ಸಮಾನತೆಗೆ ಅವಕಾಶ ನೀಡಿರುವುದರಿಂದ ಇಂದು ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಇಂಥವರ ಬಗ್ಗೆ ತಳ ಸಮುದಾಯಗಳು ಜಾಗ್ರತೆ ವಹಿಸಬೇಕು ಎಂದು ಸಿದ್ಧರಾಮಯ್ಯ ತಿಳಿಸಿದರು.

ಹಿಂದೆ ಮೀಸಲಾತಿ ವಿರೋಧಿಸುತ್ತಿದ್ದವರು ಈಗ ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಕಾರಣ ಸಮಾಜದ ಎಲ್ಲಾ ಜಾತಿಗಳು ಮೀಸಲಾತಿ ಅಡಿಯಲ್ಲಿ ಬಂದಿರುವುದು. ಮೀಸಲಾತಿ ಈಗ 60% ಆಗಿದೆ. ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ 10% ಮೀಸಲಾತಿ ಕಲ್ಪಿಸಲಾಗಿದೆ.

1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಾಧೀಶರ ವಿಭಾಗೀಯ ಪೀಠವು ಮಂಡಲ್ ಕಮಿಷನ್‌ ವರದಿಯನ್ನು ಎತ್ತಿಹಿಡಿದಿತ್ತು. ಈ ವರದಿ ಜಾರಿಯಾದ ಮೇಲೆ ಹಿಂದುಳಿದ ಜಾತಿಗಳಿಗೆ 27% ಮೀಸಲಾತಿ ಸಿಕ್ಕಿತ್ತು.  ಇದು ಜಾರಿಯಾಗಬಾರದು ಎಂದು ವಿರೋಧ ಮಾಡಿದವರು ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿ ಅವರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಮೀಸಲಾತಿ ನೀಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಒಡೆಯರ್ ಅವರು ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ, ಅದರ ಶಿಫಾರಸನ್ನು ಜಾರಿ ಮಾಡಿದರು. ಬ್ರಾಹ್ಮಣರಿಗೆ 25%, ಬ್ರಾಹ್ಮಣೇತರರಿಗೆ 75% ಮೀಸಲಾತಿ ನೀಡಿದರು. ಇದನ್ನು ಸ್ವಾತಂತ್ರ್ಯ ಬಂದ ಮೇಲೆ ತೆಗೆದುಹಾಕಲಾಯಿತು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾದ ದೇವರಾಜ ಅರಸು ಅವರು ಮೀಸಲಾತಿ ಸಂಬಂಧ ಆಯೋಗ ರಚನೆ ಮಾಡಿ, ಅದರ ಶಿಫಾರಸ್ಸಿನಂತೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಜಾರಿ ಮಾಡಿದರು.

ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73 ಹಾಗೂ 74 ನೇ ತಿದ್ದುಪಡಿ ತಂದು ರಾಜಕೀಯ ಮೀಸಲಾತಿಯನ್ನು ಘೋಷಿಸಿದರು. ನಂತರ ಇದು ನರಸಿಂಹ ರಾವ್ ಅವರ ಕಾಲದಲ್ಲಿ ಜಾರಿಯಾಯಿತು. ಕಾಂಗ್ರೆಸ್ ಪಕ್ಷ ಹಿಂದುಳಿದವರಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದಾಗ ಅದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದವರು ಬಿಜೆಪಿಯ ರಾಮಾ ಜೋಯ್ಸ್. ಆದರೆ ಸುಪ್ರೀಂ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತು.

ಸರ್ಕಾರಿ ಹಾಸ್ಟೆಲ್ ಗಳಲ್ಲಿ ಸೀಟ್ ಸಿಗದ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ರೂ.1500 ನೀಡುವ ವಿದ್ಯಾಸಿರಿ ಯೋಜನೆ ಜಾರಿಮಾಡಿದ್ದೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಮೇಲೆ ಈ ಯೋಜನೆಯನ್ನು ನಿಲ್ಲಿಸಿದೆ. ಬಿಜೆಪಿ ಪಕ್ಷ ಹಿಂದುಳಿದ ಸಮಾಜಕ್ಕೆ ಮೇಲಿಂದ ಮೇಲೆ ಅನ್ಯಾಯ ಮಾಡುತ್ತಿದ್ದರೂ ಪ್ರಶ್ನೆ ಮಾಡದೆ ಸುಮ್ಮನಿದ್ರೆ ಹೇಗೆ?

ಅರ್ಜುನ್ ಸಿಂಗ್ ಅವರು ಉನ್ನತ ಶಿಕ್ಷಣದಲ್ಲೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕು ಎಂದು ಆದೇಶ ಹೊರಡಿಸಿದರು. ಬಸವಣ್ಣ, ಬುದ್ಧ ಜಾತಿ ವ್ಯವಸ್ಥೆ ಅಳಿದು ಸಮ ಸಮಾಜ ನಿರ್ಮಾಣವಾಗಬೇಕು ಎಂದು ಸಾರಿದರು. ಇದೇ ಕಾರಣಕ್ಕೆ ಬಸವಣ್ಣ ಅನುಭವ ಮಂಟಪ ನಿರ್ಮಾಣ ಮಾಡಿದ್ದರು. ಇಂದು ಇವ ನಮ್ಮವ, ಇವ ನಮ್ಮವ ಎನ್ನುತ್ತಲೇ ನಿನ್ನ ಜಾತಿ ಯಾವುದು ಎಂದು ಕೇಳುತ್ತಾರೆ. ಇದು ಸಮಾಜದ ವಾಸ್ತವ ಸ್ಥಿತಿ.

ನಾನು ಕಷ್ಟಪಟ್ಟು ಮೀಸಲಾತಿ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ, ಇಲ್ಲವಾದರೆ ಅಲ್ಲಿಯೇ ಬಿಟ್ಟುಬಿಡಿ, ದಯವಿಟ್ಟು ರಥವನ್ನು ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಮನವಿ ಮಾಡುತ್ತೇನೆ.

1931 ರಲ್ಲಿ ಕಡೇ ಬಾರಿ ಜಾತಿಗಣತಿ ಆಗಿತ್ತು. ಮೀಸಲಾತಿ ವಿಚಾರ ನ್ಯಾಯಾಲಯದ ಮುಂದೆ ಬಂದಾಗಲೆಲ್ಲ ಜಾತಿ ಜನಸಂಖ್ಯೆಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ಅಧಿಕೃತ ದಾಖಲೆ ಏನು ನ್ಯಾಯಾಲಯ ಪ್ರಶ್ನಿಸುತ್ತಿತ್ತು. ಈ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶಿಸಿದ್ದೆ. ಯಾವ ಜಾತಿಗೂ ಅನ್ಯಾಯ ಮಾಡುವುದು ಈ ಸಮೀಕ್ಷೆಯ ಉದ್ದೇಶವಲ್ಲ. ಜಾತಿ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದು ಇದರ ಮುಖ್ಯ ಉದ್ದೇಶ.

ನಾನು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ದಗೊಂಡಿರಲಿಲ್ಲ. ಈಗ ವರದಿ ಸಿದ್ದವಾಗಿದೆ. ಇದನ್ನು ಈಗಿನ ಸರ್ಕಾರವೂ ಸ್ವೀಕರಿಸುವಂತೆ ಕಾಣುತ್ತಿಲ್ಲ ಹಾಗಾಗಿ ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ವರದಿ ಸ್ವೀಕರಿಸುತ್ತೇವೆ. ಈಗಿನ ಯಾವ ಸರ್ಕಾರಗಳಿಗೂ ಬದ್ಧತೆಯಿಲ್ಲ.

ಗಾಣಿಗರು ಬಹಳ ಹಿಂದುಳಿದ ಸಮಾಜದವರು. ಈಗ ಆಧುನಿಕ ಯಂತ್ರಗಳು ಬಂದಮೇಲೆ ಈ ಸಮಾಜದ ಉದ್ಯೋಗವನ್ನು ಕಸಿದುಕೊಂಡಿದೆ. ಈ ಸಮಾಜದವರು ಬರೀ ಎಣ್ಣೆ ತೆಗಿಯುವ ಉದ್ಯೋಗಕ್ಕೆ ಜೋತುಬೀಳದೆ ಶಿಕ್ಷಣದ ಕಡೆಗೆ ಹೆಚ್ಚು ಮಹತ್ವ ನೀಡಿ, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಪಡೆಯುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಜಾತಿಯಿಂದ ಯಾರೂ ಬುದ್ದಿವಂತರೂ ಅಲ್ಲ, ದೊಡ್ಡವರೂ ಅಲ್ಲ. ರಾಮಾಯಣ, ಮಹಾಭಾರತ ಬರೆದವರು ಕೂಡ ಸಮಾಜದಿಂದ ಶೋಷಣೆಗೊಳಪಟ್ಟ ಜಾತಿಗೆ ಸೇರಿದವರೆ. ಹೀಗಾಗಿ ಜಾತಿಯಿಂದ ಜ್ಞಾನ, ಸಾಮರ್ಥ್ಯ ನಿರ್ಧಾರಿತವಾಗಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಂಡು ಸಾಧನೆಯ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

Key words: Communities -deprived – opportunities -discuss -their problem-Former CM -Siddaramaiah.