ಕಾಫಿನಾಡಲ್ಲಿ ಭಾರಿ ಮಳೆ ಹಿನ್ನೆಲೆ: ಹೊರನಾಡಿನ ಸಂಪರ್ಕ ಸಂಪೂರ್ಣ ಬಂದ್: ನೆರೆಯಲ್ಲಿ ಸಿಲುಕಿದ್ದ 9 ಜನರ ರಕ್ಷಣೆ…   

ಚಿಕ್ಕಮಗಳೂರು,ಆ,7,2019(www.justkannada.in): ಕಾಫಿನಾಡು ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಹೊರನಾಡಿನ ಎರಡು ಮಾರ್ಗಗಳು ಬಂದ್ ಆಗಿದ್ದು ರಸ್ತೆ ಸಂಪರ್ಕವಿಲ್ಲದೆ ನೂರಾರು ಪ್ರವಾಸಿಗರ ಪರದಾಡುತ್ತಿದ್ದಾರೆ.

ಬಿಟ್ಟುಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯ ಅವಾಂತರದಿಂದ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಮಾರ್ಗ  ಬಂದ್ ಆದರೆ ರಸ್ತೆ ಕುಸಿತದಿಂದ ಹಳುವಳ್ಳಿ ಮಾರ್ಗವೂ ಬಂದ್ ಆಗಿದೆ.  ಭೂಕುಸಿತದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದೆ.

ಇದರಿಂದಾಗಿ ಹೊರನಾಡಿನ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು , ತಾಯಿ ಅನ್ನಪೂರ್ಣೇಶ್ವರಿ ದರ್ಶನವೂ ಅಸಾಧ್ಯವಾಗಿದೆ. ಇನ್ನು ರಸ್ತೆ ಸಂಪರ್ಕವಿಲ್ಲದೆ ನೂರಾರು ಪ್ರವಾಸಿಗರ ಪರದಾಡುತ್ತಿದ್ದು ದೇವಾಲಯದಲ್ಲೇ  ನೂರಾರು ಪ್ರವಾಸಿಗರು ಉಳಿದುಕೊಂಡಿದ್ದಾರೆ.

ನೆರೆಯಲ್ಲಿ ಸಿಲುಕಿದ್ದ 9 ಜನರ ರಕ್ಷಣೆ…

ಇನ್ನೊಂದೆಡೆ ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಲಾಗಿದೆ. 4 ಪುರುಷರು, 3 ಮಹಿಳೆಯರು, ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದ್ದು  ಮನುಷ್ಯರ ಜೊತೆ ಮೂರು ರಾಸುಗಳನ್ನ ಹರೇ ರಾಮ ಹರೇ ಕೃಷ್ಣ ಆಶ್ರಮದಿಂದ ರಕ್ಷಿಸಲಾಗಿದೆ.

9 ಜನರಿಗೆ ಹಂತೂರು ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.  ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಹೇಮಾವತಿ ತಟದಲ್ಲಿ ನೆರೆ ಭೀತಿ ಆವರಿಸಿದೆ. ಇಲ್ಲಿನ ನದಿಪಾತ್ರದ ಸಾವಿರಾರು ಎಕರೆ ಜಲಾವೃತವಾಗಿದೆ.

key words: chikkamagalur-horanadu-connection-bandh-  Protection – 9 people