2025ರೊಳಗೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಶೇ.11 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ- ಸಚಿವ ಡಾ.ಕೆ.ಸುಧಾಕರ್ ಆತಂಕ

ಬೆಂಗಳೂರು,ಮಾರ್ಚ್,14,2022(www.justkannada.in):  ಕ್ಯಾನ್ಸರ್ ಪೀಡಿತರ ಸಂಖ್ಯೆ ಮುಂದಿನ ಮೂರು ವರ್ಷದಲ್ಲಿ ಈಗಿರುವುದಕ್ಕಿಂತಲೂ ಶೇ.10 ರಿಂದ 11 ರಷ್ಟು ಹೆಚ್ಚಳವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಸದಸ್ಯರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಸಚಿವ ಸುಧಾಕರ್, ಬೆಂಗಳೂರು, ಭಾರತ ಮಾತ್ರವಲ್ಲ. ವಿಶ್ವದಲ್ಲೇ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. 2025ರ ವೇಳೆಗೆ ಈಗ ಇರುವ ರೋಗಿಗಳ ಸಂಖ್ಯೆಗಿಂತಲೂ ಶೇ.10ರಿಂದ 11ರಷ್ಟು ಹೆಚ್ಚಾಗುವ ಆತಂಕ ಇದೆ. ಮುಂದಿನ ಮೂರು ವರ್ಷಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಈಗಿರುವುದಕ್ಕಿಂತಲೂ ಶೇ.10ರಷ್ಟು ಹೆಚ್ಚಾಗಲಿದೆ ಎಂದು ತಿಳಿಸಿದರು.

ಅದ್ದರಿಂದ ಆಗಾಗ ಬಾಯಿ, ಸ್ತನ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ತಾಲ್ಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣಿತಿ ಪಡೆದಿರುವ ಕಿದ್ವಾಯಿ ಮಾದರಿಯ ಪ್ರಾದೇಶಿಕ ಚಿಕಿತ್ಸಾ ಕೇಂದ್ರಗಳನ್ನು ರಾಜ್ಯದ ಹಲವೆಡೆ ಆರಂಭಿಸಲಾಗುತ್ತಿದೆ.ಈಗಾಗಲೇ ತುಮಕೂರು, ಕಲಬುರಗಿ, ಮಂಡ್ಯದಲ್ಲಿ ಕ್ವಿದ್ವಾಯಿ ಕೇಂದ್ರಗಳು ಶುರುವಾಗಿವೆ ಎಂದು ತಿಳಿಸಿದರು.

ಹಾಗೆಯೇ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರಂಭಿಕ ತಪಾಸಣೆ, ಪತ್ತೆಯಿಂದ ಕ್ಯಾನ್ಸರ್ ಚಿಕಿತ್ಸೆ ಸುಲಭವಾಗುತ್ತದೆ. ಜನ ಸುರಕ್ಷಿತ ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ತಂಬಾಕು ಚಟದಿಂದ ದೂರ ಇರಬೇಕು ಎಂದು  ಸುಧಾಕರ್ ಹೇಳಿದರು.

Key words: Cancer- increase – Minister -Dr K Sudhakar