ಎಚ್‌ ಡಿಕೆ‌ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ- ಟ್ವಿಟ್ಟರ್ ನಲ್ಲಿ ಕುಟುಕಿದ ರಾಜ್ಯ ಬಿಜೆಪಿ.

ಬೆಂಗಳೂರು,ಏಪ್ರಿಲ್,4,2022(www.justkannada.in):  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿ ನಡುವೆ ಟ್ವೀಟ್ ವಾರ್ ಮುಂದುವರೆದಿದ್ದು, ಈ ನಡುವೆ ಎಚ್‌ ಡಿಕೆ‌ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ರಾಜ್ಯ ಬಿಜೆಪಿ ಘಟಕ ಕುಟುಕಿದೆ.

ಸರಣಿ ಟ್ವೀಟ್ ಮಾಡಿ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ರಾಜ್ಯ ಬಿಜೆಪಿ ಘಟಕ, ಕರ್ನಾಟಕದ ರಾಜಕಾರಣದಲ್ಲಿ ಎಚ್‌ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ. ಆವ ಕಡೆ ಹಾರುವುದೋ! ಆವ ಕಡೆ ತಿರುಗುವುದೋ? ಆವಾಗಳಾವ ಕಡೆಗೆರಗುವುದೋ ಹಕ್ಕಿ! ಎಂಬಂತಿದೆ ಎಚ್‌ಡಿಕೆ ರಾಜಕೀಯ ಧೋರಣೆ. ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು? ಎಂದು ಪ್ರಶ್ನಿಸಿದೆ.

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ಏನೊ ಜೀವನವನೆಳೆವುದೇನೊ ನೂಕುವುದದನು । ನೀನೊಂದು ಗಾಳಿಪಟ – ಮಂಕುತಿಮ್ಮ।। ಎಚ್‌ಡಿಕೆ‌ ಎಂದರೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ಟೀಕಿಸಿದೆ.

ಕುಮಾರಸ್ವಾಮಿಯವರೇ, ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

Key words: bjp-tweet-former CM-HD kumaraswamy