ಕೋವಿಡ್-19 ವಿರುದ್ಧ ಹೋರಾಟಕ್ಕೆ ಖೋಡೆ ಉದ್ಯಮ ಸಮೂಹದಿಂದ ಆಯುರ್ವೇದೀಯ ‘ವೈರಾನಾರ್ಮ್’ ಬಿಡುಗಡೆ…

ಬೆಂಗಳೂರು,ಮೇ,15,2021(www.justkannada.in):  ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನಿಸರ್ಗ ಸಹಜ ಗಿಡಮೂಲಿಕೆಗಳನ್ನು ಬಳಸಿ ಅಭಿವೃದ್ಧಿಪಡಿಸಲಾದ ಆಯುಷ್ ಅನುಮೋದಿತ ಆಯುರ್ವೇದ ಔಷಧಿ ‘ವೈರಾನಾರ್ಮ್’ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ, ಖೋಡೆ ಸಮೂಹವು ಪರ್ಯಾಯ ಔಷಧ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದೆ.jk

ಕ್ಯಾಪ್ಯೂಲ್ ರೂಪದಲ್ಲಿ ಲಭ್ಯವಿರುವ ‘ವೈರಾನಾರ್ಮ್’ ಅನ್ನು ಅಲ್ತಿಯಾ ಡಿ.ಆರ್.ಎಫ್, ಲೈಫ್ ಸೈನ್ಸಸ್ ನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುದೀರ್ಘಾವಧಿಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ)ಗೆ ಒಳಪಡಿಸಿದ ವಿಶಿಷ್ಟ ಆಯುರ್ವೇದ ಕ್ಯಾಪ್ಸೂಲ್ ಇದಾಗಿದೆ ಎಂದು ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಸ್ವಾಮಿ ಖೋಡೆ ಹೇಳಿದರು.

ಕ್ಲಿನಿಕಲ್ ಟ್ರಯಲ್ ಗಳಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿರುವ ‘ವೈರಾನಾರ್ಮ್’ ಅನ್ನು ಅಪೇಕ್ಷಿತ ಫಲಿತಾಂಶ ಪರೀಕ್ಷೆ ಹಾಗೂ ಸುರಕ್ಷತಾ ಅಧ್ಯಯನಗಳಿಗೆ ಒಳಪಡಿಸಲಾಗಿದೆ.  ಇದು ದೇಹದಲ್ಲಿ  ನ್ಯೂಟ್ರೋಫಿಲ್- ಲಿಂಫೋಸೈಟ್ ಅನುಪಾತವನ್ನು (ಆರೋಗ್ಯಕರ ವ್ಯಕ್ತಿಯಲ್ಲಿ ಎನ್.ಎಲ್.ಆರ್. ಮೌಲ್ಯಾಂಕವು 0.75 ರಿಂದ 3 ರ ಒಳಗೆ ಇರುತ್ತದೆ) ತಗ್ಗಿಸುವ ಮೂಲಕ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ. ಆದ್ದರಿಂದ, ಇದನ್ನು ರೋಗಲಕ್ಷಣವಿಲ್ಲದ ಹಾಗೂ ರೋಗಲಕ್ಷಣದೊಂದಿಗೆ ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದವರೆಗಿನ ಕೋವಿಡ್ ಸೋಂಕಿತರಿಗೆ ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಪ್ರಮಾಣವು ಸಾಧಾರಣ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ ಎಂದು ಈ ಔಷಧಿಯನ್ನು ಸೂತ್ರೀಕರಿಸಿರುವ ಡಾ.ಕೆ.ಜಿ.ಪದ್ಮನಾಭನ್ ವಿವರಿಸಿದರು.

ಮನುಷ್ಯನ ದೇಹವು ಕಾಯಿಲೆಯ ವಿರುದ್ಧ ತೋರುವ  ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವು  ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಅಭಿವೃದ್ಧಿಪಡಿಸಲಾಗಿರುವ ‘ವೈರಾನಾರ್ಮ್’, ವ್ಯಕ್ತಿಯ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ’ವನ್ನು ಹೆಚ್ಚಿಸುವ ಮೂಲಕ ಬೇಗನೇ ಚೇತರಿಸಿಕೊಳ್ಳಲು ಹಾಗೂ ಸೋಂಕು ಹರಡುವುದನ್ನು ತಡೆಯಲು ಸಹಕರಿಸುತ್ತದೆ ಎಂದು ತಿಳಿಸಿದರು.

ಇದು, ಕೋವಿಡ್ ನ ಪ್ರಮುಖ ರೋಗಲಕ್ಷಣವಾದ ಕೆಮ್ಮಿನ ತೀವ್ರತೆ, ಅದರ ಅವಧಿ ಹಾಗೂ ಉಸಿರೆಳೆತವನ್ನು (ವೇಗದ ಉಸಿರಾಟವನ್ನು) ತಗ್ಗಿಸುತ್ತದೆ ಎಂಬುದು ಕ್ಲಿನಿಕಲ್ ಟ್ರಯಲ್ ಗಳಲ್ಲಿ ದೃಢಪಟ್ಟಿದೆ. ಈ ಔಷಧಿಗೆ ಬಳಸುವ ಗಿಡಮೂಲಿಕೆ ಅಂಶಗಳು ವೈರಾಣುವು ಮೂಗಿನಲ್ಲಾಗಲೀ ಅಥವಾ ಗಂಟಲಿನಲ್ಲಾಗಲೀ ಜೀವಕೋಶದೊಂದಿಗೆ ಬೆಸೆದುಕೊಳ್ಳುವುದಕ್ಕೆ ಅವಕಾಶ ನೀಡದಿರುವ ಮೂಲಕ ವ್ಯಕ್ತಿಗೆ ರೋಗದಿಂದ ರಕ್ಷಣೆ ನೀಡುತ್ತವೆ ಎಂದರು.

“ಪರ್ಯಾಯ ಔಷಧಿಗಳ ಪೈಕಿ ‘ವೈರಾನಾರ್ಮ್’ ಮಾತ್ರವೇ ಎನ್.ಎಲ್. ಅನುಪಾತವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕ್ಲಿನಿಕಲ್ ಟ್ರಯಲ್ ನಲ್ಲಿ ಕ್ರಮಬದ್ಧವಾಗಿ ಸಾಬೀತುಪಡಿಸಿರುವ ಔಷಧವಾಗಿದೆ. ರೋಗ ಪ್ರತಿರೋಧದ ಮೂಲಭೂತ ತತ್ತ್ವಗಳನ್ನು ಆಧರಿಸಿ ‘ವೈರಾನಾರ್ಮ್’ ಅನ್ನು ಅಭಿವೃದ್ಧಿಪಡಿಸಿರುವುದರಿಂದ ವೈರಸ್ ನ ರೂಪಾಂತರಗಳಿಗೂ ಇದು ಪರಿಣಾಮಕಾರಿಯಾಗಿರುತ್ತದೆ” ಎಂದೂ ಪದ್ಮನಾಭನ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ಕೋವಿಡ್ ಬಾಧಿತ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಂದಿರ ಮೇಲೆ ‘ವೈರಾನಾರ್ಮ್’ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ನೀಡಿದೆ ಎಂದು ಅಲ್ತಿಯಾ ಡಿ.ಆರ್.ಎಫ್.ನ  ಡಾ. ಮನು ಜಗ್ಗಿ ತಿಳಿಸಿದರು.

ರಾಷ್ಟ್ರೀಯ ಆಸ್ಪತ್ರೆಗಳ ಮೌಲ್ಯಾಂಕನ ಮಂಡಳಿಯ (NABH) ಮಾನ್ಯತೆ ಹೊಂದಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಿ.ಟಿ.ಆರ್.ಐ. (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ- ಇಂಡಿಯಾ) ಅನುಮೋದನೆ ಪಡೆದು ಈ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಇದಕ್ಕಾಗಿ 250 ಕೋವಿಡ್ ಸೋಂಕಿತರನ್ನು ಆಯ್ಕೆ ಮಾಡಿ 6 ತಿಂಗಳ ಕಾಲ ಪರೀಕ್ಷೆಗಳನ್ನು ನಡೆಸಲಾಯಿತು. ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರದ ಪ್ರಕಾರ, ಇವರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ, ಒಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡಲಾಗುತ್ತಿತ್ತು. ಇನ್ನೊಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್’ ಕೊಡುತ್ತಿರಲಿಲ್ಲ. ‘ವೈರಾನಾರ್ಮ್’ ಅನ್ನು ಯಾರಿಗೆ ಕೊಟ್ಟಿರಲಿಲ್ಲವೋ ಅವರಿಗಿಂತ ಅದನ್ನು ಯಾರಿಗೆ ಕೊಡಲಾಗಿತ್ತೋ ಅವರಲ್ಲಿ ಚೇತರಿಕೆಯು ಉತ್ತಮವಾಗಿರುವುದು ವಿಶ್ಲೇಷಣೆಗಳಿಂದ ದೃಢಪಟ್ಟಿದೆ ಎಂದು ಕ್ಲಿನಿಕಲ್ ಟ್ರಯಲ್ ನ ಪ್ರಧಾನ ಮೇಲ್ವಿಚಾರಕ ಡಾ.ರಾಧಾಶ್ಯಾಮ್ ನಾಯ್ಕ್ ವಿವರಿಸಿದರು.

ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಇದು ಕಿರಿಯ ವಯಸ್ಕರು (40ಕ್ಕಿಂತ ಕಡಿಮೆ ವರ್ಷ) ಹಾಗೂ ಹಿರಿಯ ವಯಸ್ಕರು (60ಕ್ಕಿಂತ ಹೆಚ್ಚು ವರ್ಷ), ಎರಡೂ ವಯೋಮಾನದವರಲ್ಲಿ, ‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುವ ಜೊತೆಗೆ ಜೀವಕೋಶೀಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂಬುದು ಕಂಡುಬಂದಿದೆ. ಕೋವಿಡ್ 2ನೇ ಅಲೆಯು ಹಿರಿಯ ವಯಸ್ಸಿನವರ ಜೊತೆಗೆ ಕಿರಿಯ ವಯಸ್ಸಿನವರನ್ನೂ ಬಾಧಿಸುತ್ತಿರುವ ಈ ಸನ್ನಿವೇಶದಲ್ಲಿ ಇದು ಹೆಚ್ಚು ಗಮನ ಸೆಳೆದಿದೆ. ಜೀವಕೋಶ ಪ್ರತಿರೋಧದಲ್ಲಿ ಆಗುವ ಹೆಚ್ಚಳವು ದೀರ್ಘಾವಧಿ ಚೇತರಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಂತಹ ಸಹವರ್ತಿ ರೋಗಗಳಿಂದ ಬಾಧಿತರಾದವರಿಗೂ ‘ವೈರಾನಾರ್ಮ್ ಸುರಕ್ಷಿತ ಎಂಬುದು ಸಾಬೀತಾಗಿದೆ ಎಂದು ಆರೋಗ್ಯ ಸೇವಾ ಉದ್ಯಮ ಪರಿಣತ ರಾಜೀವ್ ನಾಗಿ ತಿಳಿಸಿದರು.ayurvedic-viranorm-khode-business-group-fight-kovid-19

ಈ ಆಯುರ್ವೇದ ಕ್ಯಾಪ್ಸೂಲ್  ಬಿಡುಗಡೆಯಾಗುತ್ತಿರುವುದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡ ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿ ಖೋಡೆ ಅವರು “ನಮ್ಮ ಕುಟುಂಬದ ಹಿರಿಯರ ಆಶೀರ್ವಾದ ಹಾಗೂ ದೂರದರ್ಶಿತ್ವದ ಬಲದಿಂದ ಅಪ್ಪಟ ನೈಸರ್ಗಿಕ ಗಿಡಮೂಲಿಕೆಗಳ ಅಂಶಗಳನ್ನು ಬಳಸಿ ಅಡ್ಡಪರಿಣಾಮಗಳಲ್ಲಿದ ಉತ್ಪನ್ನ ರೂಪಿಸುವಲ್ಲಿ ನಾನು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಕ್ಲಿನಿಕಲ್ ಟ್ರಯಲ್ ನಲ್ಲಿ ‘ವೈರಾನಾರ್ಮ್’ ಪರಿಣಾಮಕಾರಿ ಎಂದು ದೃಢಪಟ್ಟಿದ್ದು, ಅದರ ಹಿಂದಿನ ತಾಂತ್ರಿಕ ವಿವರಗಳನ್ನು ಜನರ ಮುಂದಿಡಲು ಸಂತೋಷವಾಗುತ್ತಿದೆ” ಎಂದರು.

‘ವೈರಾನಾರ್ಮ್’ ಸದ್ಯಕ್ಕೆ ಎಲ್.ಕೆ.ವೆಲ್ನೆಸ್ ಸೆಂಟರ್ (#75, 3ನೇ ಕ್ರಾಸ್, ರೆಸಿಡೆನ್ಸಿ ರಸ್ತೆ, ಬೆಂಗಳೂರು-560025) ಇಲ್ಲಿ ಲಭ್ಯವಿದೆ. ಆಸಕ್ತರು 080-40934216/ 93801 74977 ಸಂಪರ್ಕಿಸಬಹುದು. ಇದರ ಬೆಲೆ 60 ಕ್ಯಾಪ್ಸೂಲ್ ಗಳ ಬಾಟಲಿಗೆ ರೂ 2000 ಇದೆ. ಕೆಂಗಲ್ ಶ್ರೀಪಾದ ರೇಣು ಹಾಗೂ ತಜ್ಞವೈದ್ಯರು ಸುದ್ದಿಗೋಷ್ಠಿಯಲ್ಲಿದ್ದರು.

Key words: Ayurvedic- Viranorm – Khode Business Group – fight -Kovid-19