ಮಾಜಿ ಸಚಿವರ ಮನೆಯಲ್ಲಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ದ ಅರ್ಚಕನ ಮೇಲೆ ಹಲ್ಲೆ: ನಗದು, ಚಿನ್ನಾಭರಣ ದರೋಡೆ.

ಬೆಂಗಳೂರು,ಸೆಪ್ಟಂಬರ್,23,2021(www.justkannada.in):  ಮಾಜಿ ಸಚಿವರೊಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿಸಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸೆಪ್ಟೆಂಬರ್ 20ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ಮಣಿಕಂಠ ಶರ್ಮಾ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಗೈದು, ದರೋಡೆ ನಡೆಸಿದ್ದಾರೆ. ಬೆಂಗಳೂರಿನ ಹೆಣ್ಣೂರು ಅಂಡರ್​ಪಾಸ್ ಬಳಿ ಈ ಘಟನೆ ನಡೆದಿದ್ದು, ಅರ್ಚಕರ ಬಳಿ ಇದ್ದ 60 ಗ್ರಾಂನ ಚಿನ್ನದ ಸರ ಮತ್ತು 20 ಸಾವಿರ ನಗದು ಮತ್ತು ಮೊಬೈಲ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸೆ.20ರಂದು ಮಾಜಿ ಸಚಿವ ಆರ್​.ಶಂಕರ್ ಮನೆಯಲ್ಲಿ ಪೂಜೆ ಮುಗಿಸಿ ಅರ್ಚಕ ಮಣಿಕಂಠ ಶರ್ಮಾ ವಾಪಸಾಗುತ್ತಿದ್ದರು. ಸತ್ಯನಾರಾಯಣ ಪೂಜೆ ಮುಗಿಸಿ ಬರುತ್ತಿರುವಾಗ ಈ ಘಟನೆ ನಡೆದಿದೆ. ಕಲ್ಯಾಣನಗರದಿಂದ ಹೋಗುವ ವೇಳೆ ಅರ್ಚಕನ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Key words: Attack –priest-  Cash-jewelery –robbery-bangalore