ಏಪ್ರಿಲ್ 10 ರಂದು ರಂಗನಾಥ್ ಅವರ ಅಭಿನಂದನಾ ಗ್ರಂಥ “ರಂಗಾಭಿನಂದನ” ಬಿಡುಗಡೆ

ಮೈಸೂರು,ಏಪ್ರಿಲ್,07,2021(www.justkannada.in) : ಸರ್ಕಾರದ ಅಧಿಕಾರಿಗಳು ಎಂದರೆ ಕಡತಗಳಲ್ಲಿ ಮುಳುಗಿ ಹೋಗುವ , ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಗಳಲ್ಲಿ ಆಸಕ್ತಿ ಇಲ್ಲದ ವ್ಯಕ್ತಿಗಳು ಎಂದೇ ಬಹುತೇಕರ ಭಾವನೆ. ಬಹಳಷ್ಟು ಸಂಧರ್ಭಗಳಲ್ಲಿ ಇದು ನಿಜ ಕೂಡ. ಆದರೆ, ಇದಕ್ಕೆ ಅಪವಾದವಾಗಿ ಕೆಲವರು ಇದ್ದಾರೆ. ಅಂಥವರ ಸಂಖ್ಯೆ ವಿರಳ. ರಂಗನಾಥ್ ಅಂತಹ ವಿರಳರಲ್ಲಿ ಒಬ್ಬರು.Illegally,Sand,carrying,Truck,Seized,arrest,driver

ಕಂದಾಯ ಇಲಾಖೆ ಎಂದರೇ ಕಡತಗಳ ಇಲಾಖೆ. ಸದಾ ಕಾನೂನು, ನಿಯಮಗಳ ಜೊತೆ ಗುದ್ದಾಡುತ್ತಾ, ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುತ್ತಾರೆ ಎಂಬುದು ಜನರ ದೂರು. ಇಂತಹ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಾ, ಕಡತಗಳಲ್ಲಿ ಕಳೆದುಹೋಗದೆ, ಸಾಂಸ್ಕೃತಿಕ ಆಸಕ್ತಿಗಳನ್ನು ಮೈಗೂಡಿಸಿಕೊಂಡು ಬಂದವರು ರಂಗನಾಥ್.

ಮೈಸೂರಿನಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿರುವ ಇವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಾ, ಮೈಸೂರಿನ ಸಾಂಸ್ಕೃತಿಕ ಅಸ್ಮಿತೆ ದಸರಾದಲ್ಲಿ ಕೆಲಸ ಮಾಡುವ ಅವಕಾಶ ಪಡೆದವರು. ಈ ಅವಕಾಶವನ್ನೇ ದಸರಾ ಇತಿಹಾಸದ ಅಧ್ಯಯನಕ್ಕೂ ಬಳಸಿಕೊಂಡು, ದಸರಾ ಇತಿಹಾಸ ದಾಖಲಿಸುವ ಅರ್ಥಪೂರ್ಣ ಕೆಲಸ ಮಾಡಿದ್ದಾರೆ.

ದಸರಾ ವಿಷಯದಲ್ಲಿಯೇ ಡಾಕ್ಟರೇಟ್ ಪಡೆದಿದ್ದಾರೆ. ದೂರದರ್ಶನ ಚಂದನ ವಾಹಿನಿಯ ದಸರಾ ವೀಕ್ಷಕ‌ ವಿವರಣೆಯಲ್ಲಿ ಹಲವು ವರ್ಷ ಪಾಲ್ಗೊಂಡು ಮೆಚ್ಚುಗೆ ಗಳಿಸಿದ್ದಾರೆ.ಮೈಸೂರಿನ ಜನಪ್ರಿಯ ಪತ್ರಿಕೆ ಮೈಸೂರು ಮಿತ್ರದಲ್ಲಿ ಇವರ ಅಂಕಣಗಳ ಸರಣಿ ನೂರರ ಗಡಿ ದಾಟಿ ಮುನ್ನಡೆಯುತ್ತಿದೆ.

ರಂಗನಾಥ್ ಅವರ ಏಳು ಪುಸ್ತಗಳ ಬಿಡುಗಡೆ

ಸಂಸ್ಕೃತಿ ಪ್ರಕಾಶನ, ಮೈಸೂರು, ವಿಜಯ್ ಫೌಂಡೇಶನ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 10ರಂದು ಬೆಳಗ್ಗೆ 10.30ಕ್ಕೆ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಡಾ.ವಿ.ರಂಗನಾಥ್ ಅವರ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು, ರಂಗನಾಥ್ ಅವರ ಏಳು ಪುಸ್ತಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಬಿಡುಗಡೆಯಾಗಲಿರುವ ಏಳು ಕೃತಿಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಕಲಾವಿದರು, ಕೋಪವೇ ಸೋಲು; ಸಹನೆಯೇ ಗೆಲುವು, ನಂಬಿಕೆ ಗಳಿಸೋಣ; ನಂಬಿಕೆ ಉಳಿಸೋಣ, ಮನೆ ದೊಡ್ಡದಾಯಿತು; ಮನ ಚಿಕ್ಕದಾಯಿತು(ರಸಿಕ ಪುತ್ತಿಗೆ ಅವರ ಸಮಗ್ರ ಸಾಹಿತ್ಯ), ಇಲಿಗೆ ಅಂಜಿದ ಹುಲಿ-ಮತ್ತಿತರ ಕಥೆಗಳು, ಶಿಶು ಗೀತೆಗಳು, ಮಕ್ಕಳು ಮೂರು ಕಿರು ಕಾದಂಬರಿಗಳು ರಂಗನಾಥ್ ಅವರ ಏಳು ಕೃತಿಗಳಾಗಿವೆ.

ಅಂದು ಬೆಳಗ್ಗೆ 10.30ಕ್ಕೆ ಹಿರಿಯ ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ನಿರಂಜನ ವಾನಳ್ಳಿ ಕೃತಿಗಳ ಲೋಕರ್ಪಣೆ ಮಾಡಲಿದ್ದಾರೆ.

ಕೃಪೆ: ಅಬ್ಬೂರು ಪ್ರಕಾಶ್ ಫೇಸ್ ಬುಕ್ ವಾಲ್

key words : April 10th-Ranganath-Congratulations-Scripture-Rangabhinandana-Release