ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಆಮ್ ಆದ್ಮಿ ಪಕ್ಷ ಸಂಕಲ್ಪ: ಜನ ಸಂಪರ್ಕ ಪಾದಯಾತ್ರೆಗೆ ಚಾಲನೆ….

ಬೆಂಗಳೂರು,ಫೆ,12,2020(www.justkannada.in): ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಐದು ದಿನಗಳ ಕಾಲ ನಗರದಾದ್ಯಂತ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದೆ. ಇಂದು ನಗರದ ಮೌರ್ಯ ಸರ್ಕಲ್‌ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪಾದಯಾತ್ರೆಗೆ ಪಕ್ಷದ ರಾಜ್ಯ ಸಂಚಾಲಕರದ ಪೃಥ್ವಿರೆಡ್ಡಿಯವರು ಚಾಲನೆ ನೀಡಿದರು.

ನವೀನ ವಿಧಾನಗಳನ್ನು ಅಳವಡಿಸಿಕೊಂಡು, ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು ಮುಂಬರುವ ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ. ಎಲ್ಲಾ ವಾರ್ಡ್ ಗಳಲ್ಲಿಯೂ ಹೊಸಬೆಂಗಳೂರು ಜನಸಂವಾದ ಕಾರ್ಯಕ್ರಮಗಳ ಮೂಲಕ ನಗರದ ಸಮಸ್ಯೆಗಳ ಪರಿಹಾರಕ್ಕೆ ನಾವೀನ್ಯ ಯೋಜನೆಗಳನ್ನು ರೂಪಿಸುತ್ತಿದ್ದೇವೆ.

ಹಲವಾರು ಸಮಸ್ಯೆಗಳಿಂದ ರೋಸಿಹೋಗಿರುವ ಬೆಂಗಳೂರಿಗರ ಸಮಸ್ಯೆಗಳು ಹಾಗೂ ಕುಂದು ಕೊರತೆಗಳನ್ನು ಅರಿತು, ಜನರ ಕನಸಿನ ಹೊಸ ಬೆಂಗಳೂರನ್ನು ಕಟ್ಟುವುದರಲ್ಲಿ ಪಕ್ಷದೊಂದಿಗೆ ಜನಸಾಮಾನ್ಯರನ್ನು ಒಳಗೊಳ್ಳುವ, ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿಸಲು ಅವರ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ನಗರದಾದ್ಯಂತ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿಯವರು ತಿಳಿಸಿದರು.

ಅಲ್ಲದೆ, ಪಕ್ಷದ ಕೆಲಸಗಳು, ಸಿದ್ದಾಂತಗಳು, ಕಾರ್ಯಶೈಲಿಯನ್ನು ನೋಡಿ ಪಕ್ಷದ ಜೊತೆ ಕೈಜೋಡಿಸುವ ಜನರಿಗೆ ಪಕ್ಷದ ಸದಸ್ಯತ್ವವನ್ನು ನೀಡುವುದು ಹಾಗೂ ಸಮರ್ಥ, ಸೇವಾ ಮನೋಭಾವವುಳ್ಳ ಹಾಗೂ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾದ ಅಭ್ಯರ್ಥಿಗಳನ್ನು ಜನರ ಅಭಿಮತದೊಂದಿಗೆ ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಪಕ್ಷದ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾದಾಮ್ಲೆಯವರು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀ, ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾ ದಾಮ್ಲೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಪಕ್ಷದ ಬಿಬಿಎಂಪಿ ರಾಜಕೀಯ ಚಟುವಟಿಕೆಳ ಉಸ್ತುವಾರಿಗಳಾದ ವಿ. ಲಕ್ಷ್ಮೀಕಾಂತ್ ರಾವ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾದಯತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

Key words: Aam Aadmi Party – new Bangalore-padyatra- bbmp-election