ಸಾಲಗಾರರಿಗೆ ಬರೋಬ್ಬರಿ 90 ಕೋಟಿ ರೂ. ಹಿಂದಿರುಗಿಸಿದ ಬಾಲಿವುಡ್ ಬಿಗ್ ‘ಬಿ’ಗೆ ನಟ ಪರೇಶ್ ರಾವಲ್ ಪ್ರಶಂಸೆ.

ಮುಂಬೈ, ಡಿಸೆಂಬರ್ ,3,2022 (www.justkannada.in): ಬಾಲಿವುಡ್ ಬಿಗ್ ‘ಬಿ’, ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಎನಿಸಿಕೊಂಡಿರುವ ಅಮಿತಾಬ್ ಬಚ್ಚನ್ ಒಂದೊಮ್ಮೆ ರೂ.90 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರು ಎಂದರೆ ನೀವು ನಂಬುವಿರಾ? ಸಂದರ್ಶನವೊಂದರಲ್ಲಿ ಮಾತನಾಡಿದ ಬಾಲಿವುಡ್‌ನ ಮತ್ತೋರ್ವ ಜನಪ್ರಿಯ ನಟ ಪರೇಶ್ ರಾವಲ್ ಅವರು ಬಿಗ್ ‘ಬಿ’ಯ ಕಷ್ಟದ ದಿನಗಳನ್ನು ಸ್ಮರಿಸುತ್ತಾ ತಮ್ಮ ಕುಟುಂಬದ ಸದಸ್ಯರ ಮುಂದೆ ಸ್ವಲ್ಪವೂ ತಮ್ಮ ಕಷ್ಟ ತೋರ್ಪಸಿಡಿಕೊಳ್ಳದೆ, ಆತ್ಮವಿಶ್ವಾಸದಿಂದ ಯಾವ ರೀತಿ ತಮ್ಮ ಕಷ್ಟದ ದಿನಗಳನ್ನು ದಾಟಿದರು ಎಂಬ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಪರೇಶ್ ರಾವಲ್ ಅವರು, ಅಮಿತಾಬ್ ಬಚ್ಚನ್ ಅವರು ಕೇವಲ ಅತ್ಯದ್ಭುತ ನಟನಷ್ಟೇ ಅಲ್ಲದೆ, ಆತನಿಂದ ಕಲಿಯಬೇಕಾಗಿರುವುದು ಸಾಕಷ್ಟಿದೆ ಎಂದು ತಿಳಿಸಿದ್ದಾರೆ. ಅಮಿತಾಬ್ ಬಚ್ಚನ್ ಬರೋಬ್ಬರಿ ರೂ.೯೦ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಸಹ ಆ ದಿನಗಳನ್ನು ಅತ್ಯಂತ ಘನತೆಯಿಂದ ನಿರ್ವಹಿಸಿದರಂತೆ.

೧೯೯೯ರಲ್ಲಿ ಅಮಿತಾಬ್ ಬಚ್ಚನ್ ಅವರು ಸ್ಥಾಪಿಸಿದ್ದಂತಹ ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ಎಬಿಸಿಎಲ್) ಸಂಸ್ಥೆಯ ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸಿತು. ಇದರಿಂದಾಗಿ ಬಚ್ಚನ್ ಅವರು ಬಹುತೇಕ ದಿವಾಳಿಯಾಗಿದ್ದರಂತೆ. ಬರೋಬ್ಬರ ರೂ.೯೦ ಕೋಟಿ ಸಾಲ ಕ್ರೋಢೀಕರಣವಾಗಿತ್ತಂತೆ. ಆದರೆ ಭಾರತೀಯ ಟೆಲಿವಿಷನ್ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎನಿಸಿಕೊಂಡಿರುವ ‘ಕೌನ್ ಬನೇಗಾ ಕರೋಡಪತಿ,’ ಅಮಿತಾಬ್ ಅವರಿಗೆ ಪುರ್ನಜನ್ಮ ನೀಡಿತು. ಈ ವಿಚಾರ ಬಹುಪಾಲು ಎಲ್ಲರಿಗೂ ಗೊತ್ತು. ಜೊತೆಗೆ, ಆಗ ತೆರೆಕಂಡಂತಹ ಶಾರೂಖ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಅವರ ತಾರಾಗಣದ ‘ಮೊಹಬ್ಬತೇನ್,’ ಚಿತ್ರವೂ ಸಹ ಭರ್ಜರಿ ಯಶಸ್ಸನ್ನು ಪಡೆಯಿತು. ಹಾಗಾಗಿ ಅಮಿತಾಬ್ ಅವರು ತಮ್ಮ ಬೃಹತ್ ಸಾಲದ ಸುಳಿಯಿಂದ ಹೊರಗೆ ಬರುವುದು ಸಾಧ್ಯವಾಯಿತು.

ನಿಲೇಶ್ ಮಿಶ್ರಾ ಅವರ ಟಿವಿ ಕಾರ್ಯಕ್ರಮ ‘ದಿ ಸಲೋ ಇಂಟರ್‌ ವ್ಯೂ ಸೀರಿಸ್’ನಲ್ಲಿ ಭಾಗವಹಿಸಿ ಮಾತನಾಡಿದ ಪರೇಶ್ ರಾವಲ್ ಅವರು ಅಮಿತಾಬ್ ಅವರು ಆಗಿದ್ದಂತಹ ಸನ್ನಿವೇಶವನ್ನು ಸ್ಮರಿಸಿಕೊಂಡು, “ಅಮಿತಾಬ್ ಬಚ್ಚನ್ ಅವರಿಗೆ ಇಂತಹ ದುರ್ದಿನಗಳು ಎದುರಾಗಬಹುದು ಎಂದು ಯಾರಾದರೂ ಊಹಿಸಿದ್ದರೇ? ಅವರ ಜನಪ್ರಿಯತೆ, ಯಶಸ್ಸು ಎಂತಹದ್ದು? ಹಾಗೂ ಅವರು ಏರಿದ ಎತ್ತರ ಎಂತದ್ದು?… ಇದಕ್ಕೆ ಅವರೇ ಸಾಟಿ, ಮತ್ತು ಅವರೇ ಸ್ವತಃ ಉದಾಹರಣೆ. ಆದರೆ ಅವರಿಂದ ನಾವೆಲ್ಲರೂ ಕಲಿಯಬೇಕಾಗಿರುವುದು ತುಂಬಾ ಇದೆ, ವಿಶೇಷವಾಗಿ ಘನತೆ,” ಎಂದರು.

“ಒಮ್ಮೆ ನಾನು ಅವರಿಗೆ ಈ ಕುರಿತು ಕೇಳಿದೆ. ಅವರಿಗೆ ಕಷ್ಟದ ದಿನಗಳು ಎದುರಾದಾಗ ತಮ್ಮ ಕುಟುಂಬಸ್ಥರ ಮುಂದೆ ವ್ಯಕ್ತಪಡಿಸಿದರೇ? ಎಂದು ಕೇಳಿದೆ. ಅದಕ್ಕೆ ಅವರು ನೀಡಿದ ಉತ್ತರವೇನೆಂದರೆ: ಯಾಕೆ? ಅವರು ತಮ್ಮ ಜೀವನವನ್ನು ಜೀವಿಸಲಿ.’ ಅವರು ಎಷ್ಟು ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಆದರೆ ಎಂದಿಗೂ ಯಾರಿಗೂ ಕೆಟ್ಟದನ್ನು ಕೋರಲಿಲ್ಲ, ಅಥವಾ ಕೆಟ್ಟದಾಗಿ ಮಾತನಾಡಲಿಲ್ಲ, ಒಮ್ಮೆಯೂ ಇಲ್ಲ. ಅವರು ಮನಸ್ಸು ಮಾಡಿದ್ದರೆ ಕಾನೂನಿನ ಸಹಾಯ ಪಡೆಯಬಹುದಾಗಿತ್ತು, ಸರ್ಕಾರದ ಸಹಾಯ ಯಾಚಿಸಿ, ವಿನಾಯಿತಿಯನ್ನು ಪಡೆಯಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ಬಾಕಿ ನೀಡಬೇಕಾಗಿದ್ದ ಪ್ರತಿ ವ್ಯಕ್ತಿಗೂ ಹಣ ಹಿಂದಿರುಗಿಸಿದರು. ಅದು ಆತನ ಮೌಲ್ಯಗಳು. ಎಷ್ಟೇ ಆದರೂ ಆತ ಹರಿವನ್ಷ್ ರಾಯ್ ಬಚ್ಚನ್ ಅವರ ಮಗನಲ್ಲವೇ?. ಎಂತಹ ಮನುಷ್ಯ,” ಎಂದು ಪರೇಶ್ ಹೇಳಿದರು. ಅಮಿತಾಬ್ ಅವರು ತಮ್ಮ ಕೀರ್ತಿಯ ಉತ್ತುಂಗದ ದಿನಗಳಲ್ಲಿಯೂ ಸಹ, ಕೋಪ, ಆಕ್ರೋಶಗಳನ್ನು ವ್ಯಕ್ತಪಡಿಸುವ ಚಿತ್ರರಂಗದಲ್ಲಿರುವ ಈಗಿನ ಕೆಲವು ಜನಪ್ರಿಯ ನಟರಂತಲ್ಲದೇ, ಅದೇ ರೀತಿಯ ಘನತೆಯನ್ನು ತೋರಿಸುತ್ತಿದ್ದರು.

ಅಮಿತಾಬ್ ಬಚ್ಚನ್ ಅವರು ಸ್ವತಃ ಒಮ್ಮೆ ಹಿಂದೆ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಸಾಲಗಾರರು ಯಾವ ರೀತಿ ತಮ್ಮ ಮನೆಯ ಬಾಗಿಲಿಗೆ ಬಂದು ನಿಂದಿಸುತ್ತಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದರು. ಸಾಲ ಹಿಂದಿರುಗಿಸುವಂತೆ ಅವರಿಗೆ ಬೆದರಿಕೆಯನ್ನೂ ಹಾಕಿದ್ದರಂತೆ. ಆ ದಿನಗಳು ನನ್ನ ಜೀವನದ ಅತ್ಯಂತ ಕರಾಳ ದಿನಗಳಾಗಿದ್ದವು ಎಂದು ತಮ್ಮ ನಿಸ್ಸಹಾಯಕ ಪರಿಸ್ಥಿತಿಯನ್ನು ಹಂಚಿಕೊಂಡಿದ್ದರು.

ಅಮಿತಾಬ್ ಬಚ್ಚನ್ ಅವರು ಈ ವರ್ಷ ಬ್ರಹ್ಮಾಸ್ತ್ರ, ಊಂಚಾಯಿ, ಹಾಗೂ ಗುಡ್‌ ಬೈ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಪ್ರಭಾಸ್ ತಾರಾಗಣದ ಪ್ರಾಜೆಕ್ಟ್ ಕೆ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಪರೇಶ್ ರಾವಲ್ ಅವರು ಕೊನೆಯದಾಗಿ ಶರ್ಮಾಜಿ ನಮ್‌ ಕೀನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಪುನಃ ಅವರು ಆಂಖ್ ಮಿಚೋಲಿ, ಶೇಹಜಾದಾ ಹಾಗೂ ಹೇರಾ ಫೇರಿ ೩ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುದ್ದಿ ಮೂಲ: ಹಿಂದೂಸ್ಥಾನ್ ಟೈಮ್ಸ್

Key words: 90 crores – borrowers- Actor- Paresh Rawal -praises – Big ‘B’- Amitabh Bachchan