15 ಮಂದಿ ಶಾಸಕರಿಗೆ ಆಸೆ ಆಮಿಷವೊಡ್ಡಿ ರಾಜಕೀಯ ಸಮಾಧಿ ಮಾಡುತ್ತಿದ್ದಾರೆ- ವಿಧಾನಸಭೆಯಲ್ಲಿ ಬಿಜೆಪಿ ವಿರುದ್ದ ಸಚಿವ ಡಿ.ಕೆ ಶಿವಕುಮಾರ್ ಕಿಡಿ…

ಬೆಂಗಳೂರು,ಜು,23,2019(www.justkannada.in): ಮುಂಬೈಗೆ ತೆರಳಿರುವ ಶಾಸಕರಿಗೆ ಹಣ ಮಂತ್ರಿಗಿರಿ ಆಸೆ ಆಮಿಷ ವೊಡ್ಡಿ ಟೋಪಿ ಹಾಕಿ, ರಾಜಕೀಯ ಸಮಾಧಿ ಮಾಡುತ್ತಿದ್ದಾರೆ ಎಂದು ಸಚಿವ ಡಿಕೆ ಶಿವಕುಮಾರ್ ಕಿಡಿಕಾರಿದರು.

ವಿಧಾನಸಭೆಯಲ್ಲಿ ಇಂದು ವಿಶ್ವಾಸಮತಯಾಚನೆ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಮುಂಬೈಗೆ ತೆರಳಿರುವ ನನ್ನ ಸ್ನೇಹಿತರನ್ನ ಅತೃಪ್ತರೆಂದು ಕರೆಯಲ್ಲ. ಅವರು ಸಂತೃಪ್ತರು. ರಾಜೀನಾಮೆ ನೀಡಿರುವ 15 ಶಾಸಕರಿಗೆ ಬಿಜೆಪಿಯವರು ಮಂತ್ರಿ ಮಾಡುವ ಆಮಿಷವೊಡ್ಡಿ ನಿಮಗೆ ಟೋಪಿ ಹಾಕುತ್ತಾರೆ. ರಾಜೀನಾಮೆ ನೀಡಿರುವ ಶಾಸಕರ ರಾಜಕೀಯ ಭವಿಷ್ಯ ಸಮಾಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ರಾಜಕಾರಣದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಒಮ್ಮೆ ನಾವು, ಒಮ್ಮೆ ನೀವು ಅಷ್ಟೇ, ನಮಗೆ ಬಂದಿರುವ ಈ ಪರಿಸ್ಥಿತಿ ನಿಮಗೂ ಬರುತ್ತದೆ. ರಾಜ್ಯದ ರಾಜಕೀಯ ವ್ಯವಸ್ಥೆ ಹೇಗೆ ಸರಿ ಮಾಡಬೇಕೆಂಬದು ತಿಳಿಯುತ್ತಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿಗೆ ಟಾಂಗ್ ಕೊಟ್ಟರು.

ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸಮತಕ್ಕೆ ಅಂಕಿ-ಅಂಶಗಳಲ್ಲಿ ಏರು-ಪೇರಾಗಬಹುದು. ಯಡಿಯೂರಪ್ಪ ಅವರ ಛಲ ಮೆಚ್ಚುವಂತಹದ್ದು. ಹಲವು ಬಾರಿ ಪ್ರಯತ್ನದ ಬಳಿಕ ನಮ್ಮ 15 ಶಾಸಕರನ್ನು ತಮ್ಮತ್ತ ಸೆಳೆದು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಯಶಸ್ಸು ಕಾಣ ಬೇಕಾದ್ರೆ ಧರ್ಮರಾಯ ಧರ್ಮ ಇರಬೇಕು. ಅರ್ಜುನನ ಗುರಿ, ಭೀಮನ ಬಲ ವಿಧುರನ ನೀತಿ ಇರಬೇಕು.   ಇದೆಲ್ಲದರ ಜತೆ ಬಿಎಸ್ ವೈ ಚಲ ಮೆಚ್ಚಬೇಕಾದ್ದುದ್ದೆ.  ಈ ಬಾರಿ 15 ಜನರನ್ನ ಎತ್ತಿಕೊಂಡು ಹೋಗಿದ್ದಾರೆ ಎಂದು ಬಿಎಸ್ ವೈಗೆ ಸಚಿವ ಡಿಕೆ ಶಿವಕುಮಾರ್ ಕಾಲೆಳೆದರು.

ಬಿಎಸ್ ವೈ ಅವರೇ ನೀವು ಬಸವಣ್ಣ  ನಾಡಿನಲ್ಲಿ ಹುಟ್ಟಿದ್ದೀರಿ. ನುಡಿದಂತೆ ನಡೆಯಿರಿ. ಇಂದು ಅಂಕಿ ಅಂಶದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ನಮ್ಮ ಸ್ನೇಹಿತರು ಮುಂಬೈನಲ್ಲಿದ್ದಾರೆ. ಪ್ರಜಾಪ್ರಭುತ್ವದ ಪಿಡುಗಿಗೆ ಅಂತ್ಯ ಹಾಡಬೇಕಿದೆ ಎಂದರು.

‘ಶಾಸಕರು ರಾಜೀನಾಮೆ ಕೊಡಲು ಬಂದಾಗ ಕನಕಪುರದಲ್ಲಿದ್ದೆ. ಗಾಬರಿಯಾಗಿ ಓಡಿ ಬಂದೆ, ಮುನಿರತ್ನ ರಾಜೀನಾಮೆ ಪತ್ರ ಹರಿದು ಹಾಕಿದ್ದು ನಿಜ . ಅವರು ಕೇಸ್ ಹಾಕುತ್ತೇನೆ ಎಂದಾಗ ಎದರುಸುತ್ತೇನೆ ಎಂದೆ.ರಾಜೀನಾಮೆ ಪತ್ರ ಹರಿದು ಹಾಕಿದ್ದನ್ನ ಸಚಿವ ಡಿ.ಕೆ ಶಿವಕುಮಾರ್ ಒಪ್ಪಿಕೊಂಡರು.

Key words: 15 rebel MLA-buried –politically- Minister- DK Sivakumar