ಶಿವಮೊಗ್ಗ ಗಲಾಟೆಗೆ ಈಶ್ವರಪ್ಪ, ಆರಗ ಜ್ಞಾನೇಂದ್ರ ನೇರ ಕಾರಣ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 22, 2022 (www.justkannada.in): ಶಿವಮೊಗ್ಗದ ಗಲಾಟೆಗೆ ಸಚಿವರಾ ಈಶ್ವರಪ್ಪ, ಆರಗ ಜ್ಞಾನೇಂದ್ರ ನೇರ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸೆ.144 ಜಾರಿ ಮಾಡಿದ್ದರು, ಅದನ್ನು ಮೀರಿ ಸೋಮವಾರ ಮೆರವಣಿಗೆ ಮಾಡಿದ್ದಾರೆ. ಸೆ.144 ಜಾರಿಯಲ್ಲಿದ್ದರೂ ಮೆರೆವಣಿಗೆ ಹೇಗೆ ಮಾಡಿದರು? ಶಿವಮೊಗ್ಗದ ಸಂಸದ, ಕೆ.ಎಸ್‌ ಈಶ್ವರಪ್ಪ ಮೆರವಣಿಗೆಯಲ್ಲಿ ಹೇಗೆ ಭಾಗವಹಿಸಿದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಮಾಜಿ ಸಿಎಂ ಬಿ.ಎಸ್‌ ಯಡಿಯ್ಯೂರಪ್ಪ, ಕೆ.ಎಸ್‌.ಈಶ್ವರಪ್ಪ, ಅರಗ ಜ್ಞಾನೇಂದ್ರ ಕೂಡ ಅದೇ ಜಿಲ್ಲೆಯವರಾಗಿದ್ದಾರೆ. ಇದಕ್ಕೆಲ್ಲ ಇವರೇ ಕಾರಣ ಎಂದು ದೂರಿದ್ದಾರೆ.

ನಾನು ಈಗಾಗಲೇ ಕೊಲೆ ಮಾಡಿರುವುದನ್ನು ಖಂಡಿಸಿದ್ದು, ಕೊಲೆ ಆರೋಪಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇನೆ. ಯಾರು ಕೊಲೆ ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.