Saturday, August 8, 2026

BDA Apartments

Home Front Page ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ

ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ

ಬೆಂಗಳೂರು, ಜೂನ್,12,2025 (www.justkannada.in):  ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್ ನಲ್ಲಿ ನೂತನವಾಗಿ ಆರಂಭಿಸುತ್ತಿರುವ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯವಾದ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಮ್ಮತಿಸಿದ್ದಾರೆ.

ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿಯಾದ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್, ಕೇರಳ ಅರಣ್ಯ ಇಲಾಖೆಯಿಂದ ಆರಂಭಿಸಲಾಗುತ್ತಿರುವ ಪ್ರಥಮ ಜೈವಿಕ ಉದ್ಯಾನದಲ್ಲಿ ವನ್ಯಜೀವಿಗಳ ನಿರ್ವಹಣೆ ಕುರಿತಂತೆ ತಾಂತ್ರಿಕ ನೈಪುಣ್ಯತೆ ಹಂಚಿಕೊಳ್ಳುವಂತೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ವಿಶ್ವ ವಿಖ್ಯಾತ ಮೃಗಾಲಯ ವಿನ್ಯಾಸಕಾರ ಆಸ್ಟ್ರೇಲಿಯಾದ ಜಾನ್ ಸಿಯೋ ಅವರಿಂದ ಜೈವಿಕ ಉದ್ಯಾನದ ವಿನ್ಯಾಸ ಮಾಡಿಸಿದ್ದು, 136.8 ಎಕರೆ ಪ್ರದೇಶದಲ್ಲಿ ಇದು ಸಾಕಾರವಾಗುತ್ತಿದ್ದು, ಬರುವ ಆಗಸ್ಟ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸಶೀಂದ್ರನ್ ಮಾಹಿತಿ ನೀಡಿದರು, ಹೊಸ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿಯಾಗಿರುವ ಕೆಲವು ವನ್ಯಜೀವಿಗಳನ್ನು ನೀಡುವಂತೆಯೂ ಮನವಿ ಮಾಡಿದರು.

ಈ ಭೇಟಿಯ ವೇಳೆ ಕೇರಳ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಕುರಿತಂತೆ ಕೈಗೊಂಡಿರುವ ಕ್ರಮಗಳು, ಕಸ್ತೂರಿ ರಂಗನ್ ವರದಿಯ ಕುರಿತಂತೆ ಕೈಗೊಳ್ಳಲಾಗಿರುವ ನಿರ್ಣಯಗಳ ಕುರಿತಂತೆಯೂ ಸಮಾಲೋಚಿಸಲಾಯಿತು.

ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ ಕೃಷ್ಣನ್ ಮತ್ತು ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.vtu

Key words: Forest Minister, Ishwar Khandre, exchange,technical skills, Kerala Zoo