ಸಿಎಂ ಭೇಟಿ ಮಾಡಿದ ಗೋಲಿಬಾರ್‌ನಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರು

ಮಂಗಳೂರು, ಡಿಸೆಂಬರ್ 21, 2019 (www.justkannada.in): ನಗರದ ಸರ್ಕಿಟ್ ಹೌಸ್‌‌ನಲ್ಲಿ ಸಭೆ ನಡೆಸಲು ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪೊಲೀಸರ ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳ ಕುಟುಂಬದವರು ಭೇಟಿ ಮಾಡಿದ್ದಾರೆ.

ಸರ್ಕಿಟ್ ಹೌಸ್‌‌ಗೆ ಶಾಸಕ ಯು.ಟಿ.ಖಾದರ್ ಅವರ ಜೊತೆಯಲ್ಲಿ ಆಗಮಿಸಿರುವ ಮೃತರೊಬ್ಬರ ಪತ್ನಿ ಹಾಗೂ ಮಕ್ಕಳು, ಮತ್ತೊಬ್ಬ ಯುವಕನ ಸೋದರರು ಮುಖ್ಯಮಂತ್ರಿಗಳ ಭೇಟಿಗೆ ಆಗಮಿಸಿದ್ದಾರೆ. ಅಧಿಕಾರಿಗಳು ಮುಖ್ಯಮಂತ್ರಿಗಳ ಭೇಟಿಗೆ ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರಿಗೆ ಈ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ರಾಜಕೀಯ ಮುಖಂಡರ ಜೊತೆ ಸಭೆ ನಡೆಸಲಿದ್ದು, ಶಾಸಕ ಐವಾನ್ ಡಿಸೋಜಾ, ಕೆ.ಹರೀಶ್ ಕುಮಾರ್, ಮಾಜಿ ಶಾಸಕರಾದ ಮೊಯೀನುದ್ದೀನ್ ಬಾವಾ, ಜೆ.ಆರ್.ಲೋಬೋ, ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮದ್ ಮಸೂದ್, ಕ್ರೈಸ್ತ್ ಧರ್ಮಗುರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.