ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ- ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ

ಬೆಂಗಳೂರು,ಅಕ್ಟೋಬರ್,13,2023(www.justkannada.in): ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ವೇಳೆ 40 ಕೋಟಿ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರು‍ದ‍್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಅಶ್ವಥ್ ನಾರಾಯಣ್, ಎಟಿಎಂ ಸರ್ಕಾರ ಅನ್ನೋದು ಈಗ ಸಾಕ್ಷಿ ಸಮೇತ ಗೊತ್ತಾಗಿದೆ. ಕೇವಲ ಸಣ್ಣ ಮೊತ್ತವಷ್ಟೇ ಸಿಕ್ಕಿದೆ, ಇನ್ನೂ ಬಹಳಷ್ಟು ಕಡೆ‌ ಇರುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ಕಿರುಕುಳ ನೀಡಿ ಹೆದರಿಸಿ ಕಲೆಕ್ಷನ್ ಮಾಡಿರುವ ಈ ದುಡ್ಡು ಯಾರಿಗೆ ಸೇರಿದ್ದು ಅಂತಾ ಗುತ್ತಿಗೆದಾರರು ಹೇಳಬೇಕು. ಹಿಂಸೆ ಕೊಟ್ಟು ವಸೂಲಿ ಮಾಡಿದ್ದಾರೆಂದು ಗುತ್ತಿಗೆದಾರರು ಹೇಳಬೇಕು. ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದರು. ಅಂದು ಆಪಾದನೆ ಮಾಡಿದವರಲ್ಲಿ ಅಂಬಿಕಾಪತಿ ಒಬ್ಬ. ಯಾವುದಾದರೂ ಗುತ್ತಿಗೆದಾರರ ಹತ್ತಿರ  ಹಣ ಹೇಗೆ ಬರುತ್ತದೆ? ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು  ಎಂದು ಆರೋಪಿಸಿದರು.

Key words: evidence – government – ATM –former minister-Aswath Narayan