ನನ್ನ ಮನೆ ಮೇಲೆ ಇಡಿ ದಾಳಿಯಾದ್ರೆ ಹತ್ತು ಸಾವಿರ ರೂಪಾಯಿಯೂ ಸಿಗಲ್ಲ- ಮಾಜಿ ಸಚಿವ ಕಿಮ್ಮನೆ ರತ್ನಾಕರ್.

ಶಿವಮೊಗ್ಗ,ಜನವರಿ,11,2023(www.justkannada.in):  ನನ್ನ ಮನೆ ಮೇಲೆ ಇಡಿ ದಾಳಿಯಾದರೆ ಹತ್ತು ಸಾವಿರ ರೂಪಾಯಿಯೂ ಸಿಗುವುದಿಲ್ಲ. ಮನೆಯಲ್ಲಿರುವ ಸೋಫಾ ಹಾಗೂ ಫ್ರಿಡ್ಜ್​ಗಳನ್ನೇನಾದರೂ ತೆಗೆದುಕೊಂಡು ಹೋಗಬೇಕಷ್ಟೇ. ಇಲ್ಲವೇ ಇಡಿಯವರೇ ನನಗೆ ಕೊಟ್ಟು ಹೋಗಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಶಂಕಿತ ಉಗ್ರ ಶಾರಿಕ್ ಹಣದ ವ್ಯವಹಾರದ ಕುರಿತು ತೀರ್ಥಹಳ್ಳಿಯಲ್ಲಿರುವ ಶಾರಿಕ್​ ಅಜ್ಜನ ಒಡೆತನದ ಕಟ್ಟಡದ ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ಅದೇ ಕಟ್ಟದಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಕಿಮ್ಮನೆ ರತ್ನಾಕರ್ ಅವರ ಕಚೇರಿಯನ್ನ ಇಂದು ಇಡಿ ಪರಿಶೀಲನೆ  ನಡೆಸಿತು.

ಈ ಕುರಿತು ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ನನ್ನ ಮನೆ ಮತ್ತು ಕಚೇರಿ ಮೇಲೆ ಯಾವುದೇ ರೀತಿಯ ಇಡಿ ದಾಳಿ ನಡೆದಿಲ್ಲ. ನಾನು ಬಾಡಿಗೆಗಿದ್ದ ಕಟ್ಟಡದ ಮೇಲೆ ಇಡಿ ದಾಳಿ ನಡೆದಿದೆ. ಬೆಳಗ್ಗೆ ನಮ್ಮ ಕಚೇರಿಗೆ ಬಂದ ಇಡಿ ಅಧಿಕಾರಿಗಳು ನನ್ನನ್ನು ಕಚೇರಿಗೆ ಕರೆಯಿಸಿದ್ದರು. ಆಗ ನಾನು ಕಚೇರಿ ಬಾಡಿಗೆ ಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು.

ಹಾಸಿಮ್​ ಎಂಬುವರ ಕಟ್ಟಡವನ್ನು ಹತ್ತು ವರ್ಷಕ್ಕೆ ಲೀಸ್ ಪಡೆದಿದ್ದೇವೆ. ಜೊತೆಗೆ ಒಂದು ತಿಂಗಳಿಗೆ ಒಂದು ಸಾವಿರ ಬಾಡಿಗೆ ನೀಡುತಿದ್ದೇವೆ. ಹತ್ತು ಲಕ್ಷ ರೂಪಾಯಿ ವಾಪಸ್ ಕೊಟ್ಟ ದಿನವೇ ನಾವು ಕಟ್ಟಡ ಖಾಲಿ ಮಾಡುವುದಾಗಿ ಹೇಳಿದ್ದೇವೆ. ಹಾಸಿಮ್ ಮತ್ತು ನಮ್ಮ ನಡುವೆ ಇರುವುದು ಮಾಲೀಕ ಹಾಗೂ ಬಾಡಿಗೆದಾರ ಸಂಬಂಧವಷ್ಟೇ ಕಿಮ್ಮನೆ ರತ್ನಾಕರ್ ಹೇಳಿದರು.

Key words: ED-raid – former minister -Kimmane Ratnakar.