ಮಂಡ್ಯ,ಫೆಬ್ರವರಿ,20,2026 (www.justkannada.in): ಜನಸಾಮಾನ್ಯರು ಅತಿಯಾದ ಮೊಬೈಲ್ ಬಳಕೆ ಮಾಡುತ್ತಿರುವ ಪರಿಣಾಮವಾಗಿ ಅವರುಗಳಿಗೆ ಗೊತ್ತಿಲ್ಲದಂತೆ ಹಲವಾರು ಪರಿಣಾಮಗಳು ಬೀರುತ್ತಿವೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಕ್ಯಾತಘಟ್ಟದ ಸರ್ಕಾರಿ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ, ಮಂಡ್ಯದ ಪರಿಚಯ ಪ್ರಕಾಶನ, ಅಳಿಲು ಸೇವಾ ಬಳಗ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಸಹಾಯೋಗದೊಂದಿಗೆ ಆಯೋಜಿಸಲಾಗಿದ್ದ ‘ಉತ್ತಮ ಆರೋಗ್ಯ ಮತ್ತು ಜೀವನ ಕ್ರಮ’ ಕುರಿತು ಜಾಗೃತಿ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು.
ಮಕ್ಕಳು, ವಿದ್ಯಾರ್ಥಿಗಳು, ಯುವಕರು, ವಯಸ್ಕರು, ವಯೋವೃದ್ಧರು ನಿತ್ಯವೂ ಮೊಬೈಲ್ ಅನ್ನು ಉಪಯೋಗಿಸುತ್ತಿದ್ದು, ಮುಖ್ಯವಾಗಿ ನೆನಪಿನ ಶಕ್ತಿ ಸೇರಿದಂತೆ ಬೇರೆ ಬೇರೆ ಅನಾರೋಗ್ಯಗಳನ್ನು ತಂದೋಡ್ಡುತ್ತಿದೆ ಎಂದರು.
ರೈತರು ತಮ್ಮ ಕೃಷಿ ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರ, ರಾಸಾಯನಿಕ ಸಿಂಪಡಣೆಗಳನ್ನು ಬಳಸುತ್ತಿರುವುದರಿಂದ ಭೂಮಿ ಕ್ರಮೇಣವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ದೇಶದ ರೈತ ಸಮೂಹ ರಾಸಾಯನಿಕ ಬಳಕೆ ಹೆಚ್ಚು ಉಪಯೋಗಿಸುತ್ತಿರುವ ಪರಿಣಾಮ ನಿರೀಕ್ಷಿತ ಇಳುವರಿ ಪಡೆಯಲು ಅವರಿಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರು ಸೇವಿಸುತ್ತಿರುವ ಆಹಾರ ಪದಾರ್ಥಗಳಲ್ಲಿ ಹಲವು ತರಹದ ರಾಸಾಯನಿಕ ಅಂಶಗಳು ಪತ್ತೆಯಾಗುತ್ತಿವೆ, ಜನತೆ ಗಂಭೀರ ಸ್ವರೂಪದ ಆರೋಗ್ಯಗಳಲ್ಲಿ ಬಳಲುವಂತೆ ಮಾಡಿದೆ. ರೈತರು ಹೈಬ್ರಿಡ್ ಮಾದರಿ ತಳಿಯ ಹಸುಗಳನ್ನು ಸಾಕಿ ಹೆಚ್ಚಿನ ಹಾಲನ್ನು ಉತ್ಪಾದಿಸುತ್ತಿದ್ದು, ಇದು ಕೂಡ ವಯಸ್ಕರು, ವಯೋವೃದ್ಧರ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಆದ್ದರಿಂದ ನಮ್ಮ ದೇಶೀಯ ತಳಿಗಳಾದ ಹಳ್ಳಿಕಾರ್, ಮಲೆನಾಡು ಗಿಡ್ಡ ಸೇರಿದಂತೆ ಇತರೆ ದೇಶೀಯ ತಳಿಗಳನ್ನು ಸಾಕಲು ಮುಂದಾಗಬೇಕು. ನಮ್ಮ ಮಠದಿಂದಲೂ ಈ ಕುರಿತಾಗಿ ಹೆಚ್ಚಿನ ಅರಿವನ್ನು ಸಹ ಮೂಡಿಸುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಸಾಲು ಮರದ ತಿಮ್ಮಕ್ಕ ನಮಗೆ ಮಾದರಿಯಾಗಬೇಕು. ಹಲವಾರು ಸಸಿಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿ ಮಾಡಿದ್ದು ದಂತೆಕತೆ. ಹಿಂದೆ ಹಳ್ಳಿಗಳಲ್ಲಿ ಅತಿ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುತ್ತಿದ್ದರು, ಆದರೆ ಇಂದು ಯಾವುದೇ ಮರಗಳನ್ನು ಬಿಡದೆ ಕಡಿಯುವ ಮನಸ್ಥಿತಿ ರೂಢಿಸಿಕೊಂಡಿರುವುದು ಶೋಚನೀಯ. ಮುಖ್ಯವಾಗಿ ಮಕ್ಕಳು, ಯುವಕರು ಅತಿ ಹೆಚ್ಚು ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಮಂಡ್ಯ ಜಿಲ್ಲೆಯ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಎಸ್.ಸತೀಶ್ ಜವರೇಗೌಡ ಮಾತನಾಡಿ, ಕಳೆದ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಜನಸಾಮಾನ್ಯರಲ್ಲಿ ಪುಸ್ತಕಗಳನ್ನು ಮನೆಯಲ್ಲಿಟ್ಟು ಓದುವ ಹವ್ಯಾಸ ಇತ್ತು. ಆದರೆ ಇಂದು ಟಿ.ವಿ, ಮೋಬೈಲ್, ಲ್ಯಾಪ್ ಟಾಪ್ ಇನ್ನಿತರೆ ಎಲೆಕ್ಟ್ರಾನಿಕ್ ವಸ್ತುಗಳೆ ಅವರ ಆರಾಧ್ಯ ದೈವದಂತಾಗಿವೆ. ಬೇರೆ ಬೇರೆ ರೀತಿಯಲ್ಲಿ ವೆಚ್ಚ ಮಾಡುವ ಜನತೆ ಪುಸ್ತಕಗಳಿಗೆ ಏಕೆ ವಿನಿಯೋಗಿಸುವುದಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ ಬೆಂಗಳೂರಿನ ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಗುರೂಜಿ ಮಾತನಾಡಿ, ಗ್ರಾಮದಲ್ಲಿ ಯಾರು ಸಕ್ರಿಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರುಗಳು ಯೋಗಾ, ನಡಿಗೆ ಇಂತಹವುಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯ ಮನ್ ಪ್ರೀತ್ ಸಿಂಗ್, ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್, ಉಪನ್ಯಾಸಕ ರವಿಕಿರಣ್ ಉಪನ್ಯಾಸ ನೀಡಿದರು.
ಕ್ಯಾತಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಶಿವನಂಜಪ್ಪ, ತೋಟಗಾರಿಕೆ ಇಲಾಖೆ ಅಧಿಕಾರಿ ಕೆ.ಎಂ.ರೇಖಾ, ಗ್ರಾಮದ ಪ್ರಮುಖರಾದ ಕೆ.ಟಿ.ಜಯಪ್ರಕಾಶ್, ಬಿ.ಅಜಿತಕುಮಾರ್, ಬಿಎಂಟಿಸಿ ನೌಕರ ಗುರುದೇವರಹಳ್ಳಿ ಪುಟ್ಟಸ್ವಾಮಿ ಹಾಗೂ ಇತರರಿದ್ದರು. ಇದೇ ಸಂದರ್ಭದಲ್ಲಿ ಮಂಡ್ಯದ ಪರಿಚಯ ಪುಸ್ತಕ ಪ್ರಕಾಶನವು ಸಾಹಿತ್ಯದ ವಿವಿಧ ಪ್ರಕಾರಕ್ಕೆ ಸೇರಿದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಿದರು.
Key words: Excessive, mobile phones, use, leads, illnesses, Dr. Nischalanandanatha Swamiji







