ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ ಸುರೇಶ್.

ರಾಮನಗರ, ಮಾರ್ಚ್,28,2024 (www.justkannada.in): ಲೋಕಸಭಾ ಚುನಾವಣಾ ಕಣ ರಂಗೇರಿದ್ದು  ಇಂದಿನಿಂದ ರಾಜ್ಯದ 14  ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ನಡುವೆ ನಾಮಪತ್ರ ಸಲ್ಲಿಕೆಗೂ ಮುನ್ನ ಡಿ.ಕೆ ಸುರೇಶ್ ತಮ್ಮ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿ.ಕೆ.ಸುರೇಶ್ ಇಂದು ಬೃಹತ್ ಮೆರವಣಿಗೆ ಮೂಲಕ  ನಾಮಪತ್ರ ಸಲ್ಲಿಕೆ ಮಾಡಲಿದ್ದು ಅದಕ್ಕೂ ಮುನ್ನ ತಮ್ಮ ಮನೆ ದೇವರು ಸ್ವಕ್ಷೇತ್ರ ಕನಕಪುರದ ಕೆಂಕೇರಮ್ಮ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಈ ವೇಳೆ  ಡಿ.ಕೆ ಸುರೇಶ್ ಸಹೋದರ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಸೇರಿ  ಹಲವು ನಾಯಕರು ಇರಲಿದ್ದಾರೆ ಎನ್ನಲಾಗಿದೆ.

Key words: DK Suresh, nomination, temple