ಎಲ್ಲ ವರ್ಗದ ಜನರ ಮೇಲೆ ಬಿಜೆಪಿ ಗದಾಪ್ರಹಾರ: ಜಂಟಿ ಸುದ್ದಿಗೋಷ್ಠಿಯಲ್ಲಿ ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಏಪ್ರಿಲ್ 03, 2022 (www.justkannada.in): ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಎಲ್ಲ ವರ್ಗದ ಜನರ ಮೇಲೆ ಗದಾಪ್ರಹಾರ ಮಾಡುತ್ತಿದೆ. ನಾವು ಕೇವಲ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲದ ವಿಚಾರವಾಗಿ ಮಾತನಾಡುತ್ತಿದ್ದು, ಕಳೆದ 11 ದಿನಗಳಿಂದ ಇವುಗಳ ಬೆಲೆ ಏರುತ್ತಲೇ ಇದೆ. ಚುನಾವಣೆ ಫಲಿತಾಂಶ ಬಳಿಕ ಇದು ನಿರಂತರವಾಗಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಕೆಶಿ-ಸಿದ್ದು ಹೇಳಿದ್ದಿಷ್ಟು…
ರೈತರು, ಬಡವರು, ವ್ಯಾಪಾರಸ್ಥರು, ಮಧ್ಯಮ ವರ್ಗದವರು, ಸಾಮಾನ್ಯ ಜನರ ಮೇಲೆ ಈ ಗದಾಪ್ರಹಾರ ನಡೆದುಕೊಂಡು ಬಂದಿದೆ. ತೆರಿಗೆ ಹೆಸರಲ್ಲಿ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ. ಅಚ್ಛೇದಿನದ ಮಾತು ಕೊಟ್ಟಿದ್ದ ಮೋದಿ ಅವರು ಬೆಲೆ ಏರಿಕೆಯಿಂದ ನಿತ್ಯ ನರಕಯಾತನೆ ನೀಡುತ್ತಿದ್ದಾರೆ.

ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮೋದಿ, ವೆಚ್ಚವನ್ನು ಮಾತ್ರ ಡಬಲ್ ಮಾಡಿದ್ದಾರೆ. ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಮ್ಮ ರಾಜ್ಯದಿಂದ ಕೇಂದ್ರ ಕೃಷಿ ಸಚಿವರಿದ್ದರೂ ರಾಗಿ, ಭತ್ತ, ಜೋಳ, ತೊಗರಿ ಬೆಂಬಲ ಬೆಲೆ ನೀಡುತ್ತಿಲ್ಲ. ಖರೀದಿಯಲ್ಲೂ ಮಿತಿ ಹೇರಿದ್ದಾರೆ.

50 ಕೆ.ಜಿಯ DAP ರಸಗೊಬ್ಬರ ಚೀಲದ ಬೆಲೆ 150 ರೂ. ಹೆಚ್ಚಾಗಿದ್ದು, ಅದರ ಬೆಲೆ 1350 ರೂ. ಆಗಿದೆ. ಇನ್ನು ಚೀಲಕ್ಕೆ ಹೆಚ್ಚುವರಿಯಾಗಿ 3 ರೂ. ದರ ಏರಿಸಲಾಗಿದೆ. ದೇಶದ ರೈತರು 1.20 ಕೋಟಿ ಟನ್ ಗಳಷ್ಟು DAP ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರೈತರ ಮೇಲೆ ಹೆಚ್ಚುವರಿಯಾಗಿ 3600 ಕೋಟಿ ರೂ. ಹೊರೆ ಬೀಳಲಿದೆ.

ಕೃಷಿ ಮೇಲೂ ತೆರಿಗೆ ವಿಧಿಸಿರುವುದು ಮೋದಿ ಅವರ ಸರ್ಕಾರದ ಮತ್ತೊಂದು ಸಾಧನೆ. ರಸಗೊಬ್ಬರದ ಮೇಲೆ ಶೇ. 5ರಷ್ಟು, ಕಳೆನಾಶಕದ ಮೇಲೆ ಶೇ.18ರಷ್ಟು, ಟ್ರ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸಲಾಗಿದೆ.
ಮೋದಿ ಹಾಗೂ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ಕಳೆದ ವಾರದಿಂದ ಡೀಸೆಲ್ ಬೆಲೆಯನ್ನು 8.00 ರೂ. ಏರಿಕೆ ಮಾಡಿದೆ. ಸಗಟು ಡೀಸೆಲ್ ವ್ಯಾಪಾರದಲ್ಲಿ 25 ರೂ. ಹೆಚ್ಚಳ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ 9.20 ರೂ ಹಾಗೂ ಡೀಸೆಲ್ ಮೇಲೆ 3.46 ರೂ.ನಷ್ಟು ಅಬಕಾರಿ ಸುಂಕ ಇತ್ತು.

ಕಳೆದ ಎಂಟು ವರ್ಷದಲ್ಲಿ ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಪೆಟ್ರೋಲ್ ಮೇಲೆ 18.70 ರೂ. ಹಾಗೂ ಡೀಸೆಲ್ ಮೇಲೆ 18.34 ರೂ. ಅಬಕಾರಿ ಸುಂಕ ವಿಧಿಸಿದೆ. ಪೆಟ್ರೋಲ್ ಮೇಲೆ ಶೇ.203 ರಷ್ಟು ಹಾಗೂ ಡೀಸೆಲ್ ಮೇಲೆ ಬರೋಬ್ಬರಿ ಶೇ. 531 ರಷ್ಟು ಸುಂಕ ಹೆಚ್ಚಳ. ಇದರಿಂದ ಒಂದು ವಿಚಾರ ಸ್ಪಷ್ಟ. ಈ ಬೆಲೆ ಏರಿಕೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಿಂದಲ್ಲ, ಮೋದಿ ಸರ್ಕಾರದ ದುರಾಸೆಯಿಂದಾಗಿದೆ.

ಮೋದಿ ಅವರ ಸರ್ಕಾರ ಕಳೆದ 8 ವರ್ಷಗಳಲ್ಲಿ ಪೆಟ್ರೊಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ಸಂಗ್ರಹಿಸಿದೆ. ಕಳೆದ ಎರಡು ವರ್ಷದಲ್ಲಿ ಕೋವಿಡ್ ಸಂಕಷ್ಟದ ನಡುವೆ ಬಿಜೆಪಿಯ ಸುಲಿಗೆ ಮಾತ್ರ ನಿಂತಿಲ್ಲ, ಬದಲಿಗೆ ವಿಸ್ತರಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ ಕಚ್ಛಾ ತೈಲದ ಬೆಲೆಗಿಂತ ಈಗ ಸಾಕಷ್ಟು ಕಡಿಮೆ ಇದ್ದರೂ, ಇಂಧನ ದರ ಮಾತ್ರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಯುಪಿಎ ಅವಧಿಯಲ್ಲಿ ಕಚ್ಛಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 108 ಡಾಲರ್ ಇತ್ತು. ಆಗ ಪ್ರತಿ ಲೀಟರ್ ಪೆಟ್ರೋಲ್ 71.41 ಹಾಗೂ ಡೀಸೆಲ್ 55.49 ರೂ. ಇತ್ತು. ಇಂದು ಕೂಡ ಕಚ್ಚಾತೈಲ ಬೆಲೆ ಅಷ್ಟೇ ಪ್ರಮಾಣದಲ್ಲಿ ಇದೆಯಾದರೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108 ಹಾಗೂ ಡೀಸೆಲ್ 92 ರೂ. ಆಗಿವೆ.

ಆ ಮೂಲಕ ಬಿಜೆಪಿ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 37 ಹಾಗೂ ಡೀಸೆಲ್ 36.45 ರೂ.ನಷ್ಟು ಹೆಚ್ಚುವರಿ ದರ ವಸೂಲಿ ಮಾಡುತ್ತಿದೆ. ಇನ್ನು ಅಡುಗೆ ಅನಿಲದ ಬೆಲೆ ವಿಚಾರಕ್ಕೆ ಬಂದರೆ ಸರ್ಕಾರ ಅಲ್ಲೂ ಸುಲಿಗೆ ಮುಂದುವರಿಸಿ ಜನರನ್ನು ಕಾಡುತ್ತಿದೆ. ಈ ವಿಚಾರವಾಗಿ ಮಹಿಳೆಯರನ್ನು ಕೇಳಿದರೆ ಗೊತ್ತಾಗುತ್ತಾದೆ. ಹೀಗಾಗಿ ನಾವು ಇತ್ತೀಚೆಗೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಈ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ. ಜನರ ಹಿತ ಕಾಯುವುದಕ್ಕೆ ಕಾಂಗ್ರೆಸ್ ಪಕ್ಷ ಇದೆ. ಕೆಲವು ರಾಜ್ಯಗಳಲ್ಲಿ ಹಿನ್ನಡೆಯಾದ ಮಾತ್ರಕ್ಕೆ ನಾವು ಧೃತಿಗೆಡುವ ಅಗತ್ಯವಿಲ್ಲ. ನಾವು ಜನರ ಪರವಾಗಿ, ಅವರ ಸಮಸ್ಯೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ ಜನರಿಗೆ ತಿಳುವಳಿಕೆ ಕೊಟ್ಟು ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ.

ಬೆಲೆ ಏರಿಕೆ ನಿಲ್ಲಿಸಿ ಯುಪಿಎ ಅವಧಿಯಲ್ಲಿ ಹೇಗೆ ಬೆಲೆ ನಿಯಂತ್ರಿಸಲು ಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತೋ ಅದೇ ರೀತಿ ಈಗಲೂ ಮಾಡಬೇಕು. ಈ ಸರ್ಕಾರ ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡುತ್ತಿದೆ.

ಕಬ್ಬಿಣದ ಬೆಲೆ 90 ಸಾವಿರ ಆಗಿದೆ, ಸೀಮೆಂಟ್ 480 ರೂ. ಆಗಿದೆ. ಅಡುಗೆ ಎಣ್ಣೆಯಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ.ಗೊಬ್ಬರ ಹಾಗೂ ಇಂಧನ ತೈಲ ಬೆಲೆ ಪ್ರಮುಖ ವಿಚಾರವಾಗಿದೆ. ಜನರ ಆದಾಯ ಪಾತಳಕ್ಕೆ ಕುಸಿದರೆ, ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಈ ವಿಚಾರವಾಗಿ ರಾಜ್ಯದುದ್ದಗಲಕ್ಕೆ ನಾವು ಹೋರಾಟ ಕಾರ್ಯಕ್ರಮ ರೂಪಿಸುತ್ತಿದ್ದೇವೆ.’ ರೈತರ ಪರಿಸ್ಥಿತಿ ಕೇಳುವಂತಿಲ್ಲ. ಅವರನ್ನೂ ಶೋಷಣೆ ಮಾಡಲಾಗುತ್ತಿದೆ.

ದಾಖಲೆಯ 63 ಲಕ್ಷ ಸದಸ್ಯತ್ವ

ಕಾಂಗ್ರೆಸ್ ಸದಸ್ಯತ್ವ ನೋಂದಣಿ 63 ಲಕ್ಷ ದಾಖಲೆ ಮಟ್ಟದಲ್ಲಿ ಆಗಿದೆ. ನೋಂದಣಿ ಅವಧಿಯನ್ನು ಏಪ್ರಿಲ್ 14 ರವರೆಗೆ ವಿಸ್ತರಿಸಲಾಗಿದೆ. ನೈಜ ಸದಸ್ಯತ್ವಕ್ಕೆ ಒತ್ತು ಕೊಡಲಾಗಿದೆ.