ಯಾವ ಪಕ್ಷಕ್ಕೆ ಸೇರಬೇಕು ಎಂಬ ಬಗ್ಗೆ ಫೆ.12ರ ನಂತರ ನಿರ್ಧಾರ- ಶಾಸಕ ಶಿವಲಿಂಗೇಗೌಡ.

ಬೆಂಗಳೂರು,ಫೆಬ್ರವರಿ,10,2023(www.justkannada.in): ಈಗಾಗಲೇ ಜೆಡಿಎಸ್ ನಿಂದ ದೂರ ಉಳಿದಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು,  ಯಾವ ಪಕ್ಷಕ್ಕೆ ಸೇರಬೇಕು ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕೇ ಎಂಬುದನ್ನ ಫೆ.12ರಂದು ನಡೆಯುವ ಸಮಾವೇಶದ ನಂತರ ನಿರ್ಧಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಶಾಸಕ ಶಿವಲಿಂಗೇಗೌಡರು, ಫೆ.12ರಂದು ಅರಸೀಕೆರೆಯಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರ ಆಧಾರದ ಮೇಲೆ ನಾನು ನಿರ್ಧಾರ ಮಾಡುತ್ತೇನೆ. ಕಾಂಗ್ರೆಸ್​ಗೆ ಹೋಗಿ ಅಂತಾ ನನ್ನ ಕ್ಷೇತ್ರದ ಜನರು ಹೇಳುತ್ತಿದ್ದಾರೆ. ಕ್ಷೇತ್ರದ ಜನ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹೇಳಿದರೆ ಅದಕ್ಕೂ ಸಿದ್ಧ ಎಂದರು.

ಇದೇ ವೇಳೆ ಜೆಡಿಎಸ್ ವಿರುದ್ದ ಮತ್ತೆ ಕಿಡಿಕಾರಿದ ಶಿವಲಿಂಗೇಗೌಡರು, ನನ್ನ ವಿರುದ್ಧ ಅಭ್ಯರ್ಥಿ ಕರೆತಂದು ಸಮಾವೇಶ ಮಾಡಿದರೆ ನಾನ್ಯಾಕೆ ಹೋಗಲಿ, ಬೇರೆ ಪಕ್ಷ ಸೇರುವ ಬಗ್ಗೆ ಯಾರ ಜೊತೆಗೂ ನಾನು ಚರ್ಚೆ ಮಾಡಿಲ್ಲ. ನನಗೆ ಯಾಕೆ ಅಸಮಾಧಾನ ಇದೆ ಅಂತಾ ಕ್ಷೇತ್ರದ ಜನರಿಗೆ ಗೊತ್ತು. ನಾನು ಬಿಜೆಪಿಗೆ ಸೇರಲ್ಲ, ನಾನು ಇನ್ನೂ ಜೆಡಿಎಸ್​ನಲ್ಲೇ ಇದ್ದೇನೆ. ನನ್ನ ವಿರುದ್ಧ ಕ್ಯಾಂಡಿಡೇಟ್ ಮಾಡಿದರೆ ಹೋಗೋಕೆ ಆಗುತ್ತಾ? ನಾನೊಬ್ಬ ಶಾಸಕ, ನನ್ನ ನಾಯಕತ್ವದಲ್ಲಿ ಸಮಾವೇಶ ಆಗಬೇಕು. ನಾನು ಫೆಬ್ರವರಿ 12ರವರೆಗೆ ನೋಡುತ್ತೇನೆ, ಅವರ ಸಮಾವೇಶ ನೋಡುತ್ತೇನೆ, ನಂತರ ಸಮಾವೇಶ ಮಾಡಿ ನಿರ್ಧರಿಸುತ್ತೇನೆ ಎಂದರು.

Key words: Deciding – party – join -after -Feb 12-MLA -Shivalingegowda.