ಯಾರಾದ್ರೂ ಡಿಕೆ ಶಿವಕುಮಾರ್  ಮನೆಗೆ ಹಿಂಬಾಗಿಲಿನಿಂದ ಹೋಗಿದ್ರಾ? ಅಥವಾ ಬುರ್ಖಾ ಹಾಕಿಕೊಂಡು  ಹೋಗಿದ್ರಾ? ಶಾಸಕ ಮುನಿರತ್ನ ಟಾಂಗ್.

ಬೆಂಗಳೂರು,ಆಗಸ್ಟ್,16,2023(www.justkannada.in):   ಕಾಂಗ್ರೆಸ್​ ತೊರೆದು ಬಿಜೆಪಿಗೆ  ಸೇರಿದ್ದ ನಾಯಕರು ಈಗ  ಬಿಜೆಪಿ ತೊರೆದು  ಮತ್ತೆ ಕಾಂಗ್ರೆಸ್​​ ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಇತ್ತೀಚೆಗೆ ಬಿಜೆಪಿಯ ಕೆಲ ಶಾಸಕರು ಪ್ರತ್ಯೇಕವಾಗಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ​ಅವರನ್ನು ಭೇಟಿಯಾಗಿದ್ದರು. ಈ ಸಂಬಂಧ  ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಮುನಿರತ್ನ, ಯಾರಾದರೂ  ಡಿಕೆ ಶಿವಕುಮಾರ್​  ಮನೆಗೆ ಹಿಂಬಾಗಿಲಿನಿಂದ ಹೋಗಿದ್ದಾರಾ? ಬುರ್ಖಾ ಹಾಕಿಕೊಂಡು ಹೋಗಿದ್ದಾರಾ ? ಎಂದು ಪ್ರಶ್ನಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಶಾಸಕ ಮುನಿರತ್ನ, 17 ಜನರಲ್ಲಿ ಯಾರು ಹೋಗುತ್ತಾರೆ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ. ಬೇಕಾದರೆ ರಾಜಕೀಯ ನಿವೃತ್ತಿ ಆಗುತ್ತೇನೆ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆ. ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ. ಬಿಜೆಪಿಯಲ್ಲಿ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಗೌರವದಿಂದ ಮಾತಾಡಿಸುತ್ತಾರೆ ಎಂದು ಹೇಳಿದರು.

ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್

ಡಿಕೆ ಶಿವಕುಮಾರ್​ ನನ್ನ ರಾಜಕೀಯ ಗುರು ಎಂಬ ಎಸ್​ಟಿ ಸೋಮಶೇಖರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮುನಿರತ್ನ, ಅದು ಅವರ ವೈಯಕ್ತಿಕ ಅಭಿಪ್ರಾಯ, ನಾನು ಡಿಕೆ ಸುರೇಶ್​ 40 ವರ್ಷದಿಂದ ಸ್ನೇಹಿತರು. ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್. ಅದು ರಾಜಕೀಯ ಕಾರಣಕ್ಕೆ ಅಲ್ಲ, ಅದು ನಮ್ಮ ಊರಿನ ಸಂಬಂಧ. ವೈಯಕ್ತಿಕವಾಗಿ ಡಿಕೆ ಸುರೇಶ್, ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಜತೆ ದ್ವೇಷವಿಲ್ಲ ಎಂದರು.

ಡಿ.ಕೆ.ಶಿವಕುಮಾರ್​ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ..

ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ಜೈಲಿಗೆ ಹೋಗಲು ಸಿದ್ಧ. ನನಗೆ ಆರ್​.ಆರ್​.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಡಿ.ಕೆ.ಶಿವಕುಮಾರ್​ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು ಮುನಿರತ್ನ ಹೇಳಿದರು.

Key words: DCM-DK shivakumar- congress-BJP-MLA -Muniratna