ಡಿಸಿಎಂ ಅಶ್ವಥ್ ನಾರಾಯಣ್ ಜನ್ಮದಿನ ಸಂಭ್ರಮ: 52 ಕೆಜಿ ಕೇಕ್‌ ಕತ್ತರಿಸಿದ ಅಭಿಮಾನಿಗಳು; ಕುಕ್ಕರ್‌, ಲಾಡು ವಿತರಣೆ…

ಬೆಂಗಳೂರು,ಫೆಬ್ರವರಿ,2,2021(www.justkannada.in):  ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಗಳವಾರ 52ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬವನ್ನು ಪಕ್ಷದ ಕಾರ್ಯಕರ್ತರು ಹಾಗೂ ಮಲ್ಲೇಶ್ವರಂ ಕ್ಷೇತ್ರದ ಜನರು ಅದ್ಧೂರಿಯಿಂದ ಆಚರಿಸಿದರು.jk

ಅವರ ಸ್ವಕ್ಷೇತ್ರ ಮಲ್ಲೇಶ್ವರಂ  ಸೇರಿದಂತೆ ರಾಜ್ಯದ ಅನೇಕ ಕಡೆ ಡಿಸಿಎಂ ಅಶ್ವಥ್ ನಾರಾಯಣ್  ಅವರ ಹುಟ್ಟುಹಬ್ಬವನ್ನು ಆಚರಿಸಿರುವ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು 52 ಕೆ.ಜಿ. ತೂಕದ ಕೇಕ್‌ಗಳನ್ನು ನೂರಾರು ಸಂಖ್ಯೆಯಲ್ಲಿ ಕತ್ತರಿಸಿ ಸಂಭ್ರಮಿಸಿದರು. ಜತೆಗೆ, 5,000 ಕುಕ್ಕರ್‌ ಹಾಗೂ ಲಾಡುಗಳನ್ನು ವಿತರಣೆ ಮಾಡಿದರು.

ಬೆಳಗ್ಗೆ 6 ಗಂಟೆ ಹೊತ್ತಿಗೆ ಆದಿಚುಂಚನಗಿರಿ ಮಠ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಕರೆ ಮಾಡಿ ಡಿಸಿಎಂ ಅವರನ್ನು ಆಶೀರ್ವದಿಸಿದರು. ಪಕ್ಷದ ಹಿರಿಯ ನಾಯಕರು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.

ಮಲ್ಲೇಶ್ವರದ ಮಿಲ್ಕ್‌ ಕಾಲೋನಿಯಲ್ಲಿ ಕಾರ್ಯಕರ್ತರ ಜತೆ ಕೇಕ್‌ ಕತ್ತರಿಸುತ್ತಿದ್ದ ಡಿಸಿಎಂ ಅವರನ್ನು ಭೇಟಿಯಾದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಶಭ ಕೋರಿದರು. ಅನೇಕ ಕಡೆ ಕೇಕ್‌ ಕಟ್‌ ಮಾಡುವ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ  ಮಲ್ಲೇಶ್ವರದಲ್ಲಿ ಬೃಹತ್‌ ಸೇಬುಮಾಲೆ ಅರ್ಪಿಸಿದರು, ಇನ್ನು ಕೆಲವೆಡೆ ಭಾರೀ ಪ್ರಮಾಣ ಹೂಮಾಲೆಗಳನ್ನು ಹಾಕಿ ಶುಭ ಕೋರಲಾಯಿತು.

ಸಸಿ ನೆಟ್ಟು ಸಂಭ್ರಮ;

ಬೆಳಗ್ಗೆಯೇ ಆರು ಗಂಟೆಗೆಲ್ಲ ಆರ್‌ಎಂವಿ ಎಕ್ಸ್‌ಟೆನ್ಷನ್‌ ಪಾರ್ಕ್‌ನಲ್ಲಿ ಸಸಿ ನೆಡುವ ಮೂಲಕ ಇನ್ನೊಂದು ವರ್ಷಕ್ಕೆ ಕಾಲಿಟ್ಟ ಡಿಸಿಎಂ ಅವರು, ಅಲ್ಲೇ ಕೇಕ್‌ ಕತ್ತರಿಸಿದರು. ಸ್ಥಳೀಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು; “ಜನರು ನನ್ನ‌ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.  ಮೊದಲಿಂದಲೂ ನಾನು ಸರಳವಾಗಿಯೇ ಹುಟ್ಟುವನ್ನು ಆಚರಿಸಿಕೊಳ್ಳುತ್ತೇನೆ. ಈ ವರ್ಷ ಕೋವಿಡ್‌ ಬೇರೆ ಇನ್ನೂ ಹೋಗದಿರುವುದರಿಂದ ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರು ಅತ್ಯಂತ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿ ನನ್ನನ್ನು ಹರಸಿದ್ದಾರೆ. ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಅದರಲ್ಲೂ ಗಿಡ ನೆಡುವ ಮೂಲಕ ಮತ್ತೊಂದು ವರ್ಷಕ್ಕೆ ಕಾಲಿಟ್ಟಿದ್ದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿದೆ” ಎಂದರು.

ವಿವಿಧೆಡೆ ಕೇಕ್‌ ಮತ್ತು ಸಿಹಿ ಹಂಚಿಕೆ:

ಸುಬ್ರಹ್ಮಣ್ಯ ನಗರದ ಮಿಲ್ಕ್ ಕಾಲೊನಿಯ ಆಟದ ಮೈದಾನದಲ್ಲಿ ಡಾ.ಅಶ್ವತ್ಥನಾರಾಯಣ ಅವರ ಹುಟ್ಟುಹಬ್ಬದ ನಿಮಿತ್ತ  5,000 ಕುಕ್ಕರ್ʼಗಳು, 5,000 ಸಿಹಿ ತಿನಿಸುಗಳ ಬಾಕ್ಸ್ʼಗಳನ್ನು ಜನರಿಗೆ ವಿತರಿಸಲಾಯಿತು. ಚಲನಚಿತ್ರ ನಿರ್ಮಾಪಕ, ಸಮಾಜ ಸೇವಕ ಸುರೇಶ ಗೌಡ ಅವರ ನೇತೃತ್ವದಲ್ಲಿ ಈ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರು ಉಪ ಮುಖ್ಯಮಂತ್ರಿಗಳನ್ನು ಅಕ್ಕರೆಯಿಂದ ಬರಮಾಡಿಕೊಂಡು ಶುಭ ಹಾರೈಸಿದರಲ್ಲದೆ, ಬೃಹತ್‌ ಹೂಮಾಲೆಗಳನ್ನು ಹಾಕಿ ಸಂಭ್ರಮಿಸಿದರು.

ಮತ್ತಿಕೆರೆಯ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತೆರಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡೊಳ್ಳು ಕುಣಿತ ಮತ್ತಿತರೆ ಜಾನಪದ ಕಲಾವಿದರು ಡಾ.ಅಶ್ವತ್ಥನಾರಾಯಣ ಅವರನ್ನು ಬರಮಾಡಿಕೊಂಡರು. ಸುಬೇದಾರಪಾಳ್ಯದಲ್ಲಿಯೂ ಇದೇ ರೀತಿಯ ಸಂಭ್ರಮ ಮನೆ ಮಾಡಿತ್ತು. ಡೊಳ್ಳು ಕುಣಿತ ಕಲಾವಿದರೂ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಡಿಸಿಎಂ ಅವರು ಅಂಗನವಾಡಿ ಕೇಂದ್ರವನ್ನು ಉದ್ಘಾಟನೆ ಮಾಡಿದರು.

ಗುಟ್ಟಹಳ್ಲಿಯ ರಾಮದೇವರ ಪಾರ್ಕ್ʼನಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕೇಕ್ ಕತ್ತರಿಸಿ ಡಿಸಿಎಂ ಹುಟ್ಟುಹಬ್ಬವನ್ನ ಆಚರಿಸಿದರು. ಈ ಸಂದರ್ಭದಲ್ಲಿ ಡೊಳ್ಳು ಕುಣಿತದ ಆಕರ್ಷಣೆಯ ಜತೆಗೆ, ಸಾರ್ವಜನಿಕರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.DCM Ashwath Narayan -Birthday –Celebration-bangalore

ಮಲ್ಲೇಶ್ವರದಲ್ಲಿ ಸಂಭ್ರಮ

ಇನ್ನು, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಕ್ಷೇತ್ರ ಮಲ್ಲೇಶ್ವರಂನಲ್ಲಿ ಅನೇಕ ಕಡೆ ಹುಟ್ಟುಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಮ್ಮ ಕಚೇರಿಯಲ್ಲಿ ಬೆಳಗ್ಗೆಯಿಂದಲೇ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯೂ ಕೇಕ್‌ ಕತ್ತರಿಸಿ ಸಂಭ್ರಮಿಸಲಾಯಿತು. ಇಲ್ಲಿ ಡಿಸಿಎಂ ಅವರು ವಿಶೇಷ ಪೂಜೆ ನೆರವೇರಿಸಿದರು. ಕ್ಷೇತ್ರದ ಇನ್ನೂ ಅನೇಕ ಕಡೆ ಹಾಗೂ ನಗರದ ವಿವಿಧೆಡೆ ಉಪ ಮುಖ್ಯಮಂತ್ರಿಗಳು ತಮ್ಮ ಜನ್ಮದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾತ್ರಿವರೆಗೆ ನಡೆಯಿತು. ಮಾಜಿ ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರು 20 ಸಾವಿರಕ್ಕೂ ಹೆಚ್ಚು ಲಾಡುಗಳನ್ನು ಹಂಚಿದರು.

Key words: DCM Ashwath Narayan -Birthday –Celebration-bangalore