ಮೈಸೂರು-ಬೆಂಗಳೂರು ದಶಪಥ ಹೈವೇ ಮೂಲಕ ಕೇಂದ್ರ ಸರಕಾರದಿಂದ ಹಗಲು ದರೋಡೆ: ಎಂ.ಲಕ್ಷ್ಮಣ್

ಮೈಸೂರು, ಜುಲೈ 02, 2023 (www.justkannada.in): ಮೈಸೂರು-ಬೆಂಗಳೂರು ದಶಪಥ ಹೈವೇ ಚಾಲನೆಗೊಂಡು ಐದಾರು ತಿಂಗಳು ಕಳೆಯಿತು. ಜನರ ಸುಲಿಗೆ ಮಾಡುವ ವ್ಯವಸ್ಥೆಯನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಬೆಂಗಳೂರಿಗೆ ಹೋಗಲು ಎರಡೆರಡು ಬಾರಿ ಟೋಲ್ ಶುಲ್ಕ ಕಟ್ಟಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಡೆ 330 ಇನ್ನೊಂದು ಕಡೆ 330 ರೂ. ಪಾವತಿಸಬೇಕಿದೆ.  ಇದು ಜನರ ಸುಲುಗೆ ಅಲ್ಲದೆ ಬೇರೇನು ಅಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ನಾಲ್ಕು ಪಥದ ರಸ್ತೆ ಮಾಡಿದ್ರು, ಉಚಿತವಾಗಿ ಸಂಚಾರ ಮಾಡುಬಹುದಿತ್ತು. ಈಗ ದಶಪಥ ರಸ್ತೆ ಅಂತ ಮಾಡಿ ಜನರ ಬಳಿ ಸುಲಿಗೆ ಮಾಡ್ತಾ ಇದ್ದಾರೆ ಎಂದು ಟೀಕಿಸಿದರು.

ಆರಂಭದಲ್ಲಿ 3 ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾದ ಈ ರಸ್ತೆಗೆ ರಸ್ತೆ ಕಾಮಗಾರಿ ಈಗ ಸುಮಾರು 12 ಸಾವಿರ ಕೋಟಿ ವೆಚ್ಚವಾಗಿದೆ ಎನ್ನುತ್ತಾರೆ. ಒಟ್ಟು118 ಕಿ.ಮೀ ಗೆ ಇದೆ. ಕಿ ಮೀ ಗೆ 4 ರೂ ಟೋಲ್ ನಿಗದಿ ಮಾಡಿದ್ದಾರೆ. ಬೇರೆ ಹೆದ್ದಾರಿಗಳಲ್ಲಿ ಕೇಬಲ 1.48 ಪೈಸ್ ನಿಗದಿಯಾಗಿದೆ. ಒಂದು ದಿನಕ್ಕೆ ಒಂದು ಲಕ್ಷ ವಾಹನಗಳು ಸಂಚಾರ ಮಾಡುತ್ತವೆ ಎಂಬ ಅಂದಾಜು ಇದೆ. ಒಂದು ದಿನಕ್ಕೆ ಸುಮಾರು10 ಕೋಟಿ ಕಲೆಕ್ಷನ್ ಆಗುತ್ತದೆ. ಇದೇ ರೀತಿ 30 ವರ್ಷ ಟೋಲ್ ಸಂಗ್ರಕ್ಕೆ ಅನುಮತಿ ಕೊಟ್ಟಿದ್ದಾರೆ. 30 ವರ್ಷಕ್ಕೆ ಎಷ್ಟು ಕೋಟಿ ಆಗುತ್ತೆ ಹೇಳಿ? ಈ ಮೂಲಕ ಸಾವಿರಾರು ಕೋಟಿ ಹಗಲು ದರೊಡೆ ಮಾಡುತ್ತಿದ್ದಾರೆ.  ಕೇಂದ್ರ ಸರ್ಕಾರ ಈ ಮೂಲಕ ರಸ್ತೆ ದರೋಡೆ ಮಾಡುತ್ತಿದೆ ಎಂದು ದೂರಿದರು.

ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿ ಜನರನ್ನ ಕೊಲ್ಲುವ ಕೆಲಸ ಮಾಡುತ್ತಿದ್ದಾರೆ. ಮೈಸೂರು ಬೆಂಗಳೂರು ದಶಪಥ ರಸ್ತೆ ಅವೈಜ್ಞಾನಿಕ ನಿರ್ಮಾಣ ಕುರಿತು ಕೇಂದ್ರ ಮತ್ತು ಸ್ಥಳೀಯ ಸಂಸದ ಪ್ರತಾಪ್ ಸಿಂಹ ವಿರುದ್ಧ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಟೋಲ್ ನಿಂದ ಕಲೆಕ್ಷನ್‌ ಆಗುತ್ತಿರುವುದು ದಿನಕ್ಕೆ 10 ಕೋಟಿ, ಸರ್ಕಾರಕ್ಕೆ ಇವರು ಕಟ್ಟುತ್ತಿರುವುದು ಕೇವಲ 59 ಲಕ್ಷ. ಅಂದರೆ ಉಳಿದ ಹಣ ರಸ್ತೆ ನಿರ್ಮಾಣ ಮಾಡಿದವರ ಕೈ ಸೇರುತ್ತದೆ. ಇದರಲ್ಲಿ ಎಷ್ಟು ಪ್ರತಾಪ್ ಸಿಂಹ ಅವರ ಕೈ ಸೇರುತ್ತ ಅಂತ ಹೇಳಬೇಕು ಎಂದು ಎಂ.ಲಕ್ಷ್ಮಣ್  ವಾಗ್ದಾಳಿ ನಡೆಸಿದರು.