ಕೋವಿಡ್​ ಗೂ ಟೊಮ್ಯಾಟೋ ಫ್ಲೂಗೂ ಸಂಬಂಧವಿಲ್ಲ-ಸಚಿವ ಡಾ. ಕೆ. ಸುಧಾಕರ್.

ಬೆಂಗಳೂರು, ಮೇ 12,2022(www.justkannada.in): ಕೇರಳದ ಕೆಲ ಜಿಲ್ಲೆಗಳಲ್ಲಿ ಕಂಡು ಬಂದಿರುವ ಟೊಮ್ಯಾಟೋ ಜ್ವರಕ್ಕೂ ಕೊರೋನಾಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಕೇರಳದ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಟೊಮ್ಯಾಟೋ ಫ್ಲೂ ಹೊಸದಾಗಿ  ಬಂದಿರುವ ಜ್ವರ ಅಲ್ಲ. ಇದು ಕೇರಳದಲ್ಲಿ ಕೆಲ ವರ್ಷಗಳಿಂದ ಕಾಣಿಸಿಕೊಳ್ಳುತ್ತಿದೆ. ಇದು ಕೇವಲ ಕೆಲ ಪ್ರದೇಶಗಳಲ್ಲಿ ಮಾತ್ರ ಇದು ಕಾಣಿಸಿಕೊಂಡಿದೆ.  5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಜ್ವರ ಹಾಗೂ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತಿವೆ.  ಕೇರಳದಲ್ಲಿ ಆರೋಗ್ಯ ಇಲಾಖೆ ಇದಕ್ಕೆ ಚಿಕಿತ್ಸೆಗಳನ್ನು ನೀಡುತ್ತಿದೆ. ಕೇರಳ ಆರೋಗ್ಯ ಇಲಾಖೆಯ ಜೊತೆ ಕರ್ನಾಟಕದ ಆರೋಗ್ಯ ಇಲಾಖೆಯೂ ಸಂಪರ್ಕದಲ್ಲಿದೆ ಎಂದು ಹೇಳಿದರು.

ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು, ವಿಶೇಷವಾಗಿ ಮಕ್ಕಳ ಬಗ್ಗೆ ನಿಗಾ ಇಡಲು ಈಗಾಗಲೇ ಗಡಿ ಭಾಗದ ಜಿಲ್ಲಾ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಷ್ಟೇ ಅಲ್ಲ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿರುವ ಮಕ್ಕಳ ಮೇಲೂ ನಿಗಾ ಇಡಲಾಗಿದೆ.  ಮಕ್ಕಳಿಗೆ ಜ್ವರ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಂಡು ಬಂದರೆ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಟೊಮ್ಯಟೋ ಜ್ವರದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದೆ. ಸಾರ್ವಜನಿಕರು ಇದನ್ನು ನಂಬಬಾರದು ಎಂದು ಕಿವಿಮಾತು ಹೇಳಿದ್ದಾರೆ.  ಇಲ್ಲಿ ತನಕ ಕರ್ನಾಟಕದಲ್ಲಿ ಟೊಮ್ಯಾಟೋ ಫ್ಲೂನ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ ಗಡಿಭಾಗದಲ್ಲಿ,  5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಜ್ವರ ಅಥವಾ ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿದರೆ ತಪಾಸಣೆ ಮಾಡಲು ಸೂಚಿಸಲಾಗಿದೆ.

ಕೊರೊನಾ 4ನೇ ಅಲೆಯ ಗಂಭೀರತೆ ಕಡಿಮೆ ಇದೆ. ಆದರೆ ಎಲ್ಲರೂ 3ನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಸಚಿವ ಸುಧಾಕರ್ ಹೇಳಿದರು.

Key words: covid -not associated – tomato flu-Minister – K.Sudhakar