ಕಾಂಗ್ರೆಸ್ ಪ್ರಣಾಳಿಕೆ ರಚನಾ ಸಮಿತಿ ಸದಸ್ಯರಾಗಿ ನೇಮಕ: ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸಿದ್ಧರಾಮಯ್ಯ ಧನ್ಯವಾದ.

ಬೆಂಗಳೂರು,ಡಿಸೆಂಬರ್,23,2023(www.justkannada.in): ಮುಂಬರುವ ಲೋಕಸಭಾ ಚುನಾವಣೆಯ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ಯಲ್ಲಿ ನನ್ನನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳನ್ನ ಹೇಳುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರದ  ‘ಕರ್ನಾಟಕ ಮಾದರಿ’ ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನ ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಈ ಕರ್ನಾಟಕ ಮಾದರಿ ಆಡಳಿತಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ.

ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ, ಜನತೆಗೆ ನಾವು ನೀಡುವ ವಚನವಾಗಿದ್ದು ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು.

ಹಿಂದಿನ ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು – ಸಮಬಾಳು’ ನೀಡುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆಯನ್ನು ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡಾ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡ ಕರ್ನಾಟಕ ಮಾದರಿ ಆಡಳಿತದ ಅನುಕೂಲಗಳನ್ನು ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ನನ್ನ ಎಲ್ಲ ಯೋಚನೆ-ಯೋಜನೆಗಳಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿರುವ ಪಕ್ಷದ ಹಿರಿಯರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ  ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದ್ದಾರೆ.

Key words: Congress -Manifesto Drafting Committee –Member- CM Siddaramaiah -Mallikarjuna Kharge