ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರ ಯತ್ನ: ನನಗೆ ನಾರಿಶಕ್ತಿ ಆಶೀರ್ವಾದವಿದೆ- ಪ್ರಧಾನಿ ಮೋದಿ.

ಚಿಕ್ಕಬಳ್ಳಾಪುರ, ಏಪ್ರಿಲ್ 20,2024 (www.justkannada.in): ಪ್ರಧಾನಿ ಹುದ್ದೆಯಿಂದ ನನ್ನನ್ನು ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಆದರೆ  ನನಗೆ ನಾರಿಶಕ್ತಿಯ ಬೆಂಬಲ ಆಶೀರ್ವಾದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಕಸಿತ ಭಾರತಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ. ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಎನ್‌ಡಿಎ ಸರ್ಕಾರ ಬದ್ಧವಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಪ್ರಧಾನಿ ಮೋದಿ, 25  ಕೋಟಿ ಜನರನ್ನ ಬಡತನ ರೇಖೆಯಿಂದ ಮೇಲೆತ್ತಲಾಗಿದೆ.  ದಿನದ 24 ಗಂಟೆ ದೇಶ ಜನರಿಗಾಗಿ ದುಡಿಯುತ್ತಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ 14 ಸಾವಿರಕ್ಕೂ ಹೆಚ್ಚು ಮನೆ, ಕೋಲಾರದಲ್ಲಿ 20 ಸಾವಿರಕ್ಕೂ ಹೆಚ್ಚು ಮನೆ ನಿರ್ಮಿಸಲಾಗಿದೆ. ಮಹಿಳೆಯರು ಸವಾಲಿನ ನಡುವೆ ತಮ್ಮ ತಮ್ಮ ಕುಟುಂಬ ನಡೆಸುತ್ತಿದ್ದಾರೆ ಎಲ್ಲಾ ದೊಡ್ಡ ದೊಡ್ಡ ಶಕ್ತಿಗಳು ಮೋದಿ ಕೆಳಗಿಳಿಸಲು ಹೊರಟಿದ್ದಾರೆ.  ಆದರೆ ಈ ಮೋದಿಗೆ ನಾರಿಶಕ್ತಿಯ ಬೆಂಬಲವಿದೆ. ದೇಶದ ಜನರಿಗೆ ಉಚಿತವಾಗಿ ಪಡಿತರ ನೀಡುತ್ತಿದ್ದೇವೆ. ಇದು ಮೋದಿ ಗ್ಯಾರಂಟಿ. ಮುಂದಿನ 5 ವರ್ಷವೂ ಉಚಿತವಾಗಿ ಪಡಿತರ ನೀಡುತ್ತೇವೆ. ಹಾಗೆಯೇ ಬಡವರಿಗೆ ಉಚಿತ ವೈದ್ಯ ಚಿಕಿತ್ಸೆ ಸಿಗುತ್ತೆ ಎಂದು ಯಾರೂ ಭಾವಿಸಿರಲಿಲ್ಲ. ಆದಿವಾಸಿ ಸಮುದಾಯದವರಿಗೆ ರಾಷ್ಟ್ರಪತಿ ಹುದ್ದೆ ನೀಡಲಾಗಿದೆ. ಮುದ್ರಾ ಯೋಜನೆಯಡಿ ಶ್ಯೂರಿಟಿ ಇಲ್ಲದೆ 20 ಲಕ್ಷ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇಂಡಿಯಾ ಬಣಕ್ಕೆ ನಾಯಕನಿಲ್ಲ, ಭವಿಷ್ಯದ ದೃಷ್ಟಿಕೋನವಿಲ್ಲ ಮತ್ತು ಅವರ ಇತಿಹಾಸವು ಹಗರಣಗಳಿಂದ ಕೂಡಿದೆ  ಎಂದು ಟೀಕಿಸಿದರು.

ಇದೇ ವೇಳೆ ಹೆಚ್.ಡಿ ದೇವೇಗೌಡರನ್ನ ಹೊಗಳಿದ ಮೋದಿ, ಈ ಇಳಿ ವಯಸ್ಸಿನಲ್ಲೂ ಹೆಚ್‌ಡಿ ದೇವೇಗೌಡರ ಬದ್ಧತೆ, ಉತ್ಸಾಹ ನಮಗೆಲ್ಲರಿಗೂ ಪ್ರೇರಣೆ. ಹಿರಿಯ ನಾಯಕ ದೇವೇಗೌಡ ಆಶೀರ್ವಾದ ಇಂದು ನನಗೆ ಸಿಕ್ಕಿದೆ ಎಂದರು.

Key words: Chikkaballapur,PM,Modi, BJP, JDS