ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ಹಾಸ್ಟೆಲ್ ಗಳಿಗೆ  ಜಿಲ್ಲಾಧಿಕಾರಿ ಶಿಲ್ಪನಾಗ್ ದಿಢೀರ್ ಭೇಟಿ, ಪರಿಶೀಲನೆ.

ಚಾಮರಾಜನಗರ,ಆಗಸ್ಟ್,2,2023(www.justkannada.in):  ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್ ಅವರು ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ಹಾಸ್ಟೆಲ್ ಗಳಿಗೆ  ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಗೇಟ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಗೆ ಅನಿರೀಕ್ಷಿತ ಭೇಟಿ ನೀಡಿದ ಡಿಸಿ ಶಿಲ್ಪನಾಗ್, ಅಡುಗೆ ಸಾಮಾಗ್ರಿಗಳು, ದಿನಸಿ ದಾಸ್ತಾನು ವೀಕ್ಷಣೆ ಮಾಡಿದರು. ಶುಚಿತ್ವ, ಆಹಾರ ವಿತರಣೆ, ಮೆನು ಪರಿಶೀಲಿಸಿದರು. ಹಾಗೆಯೇ ರಾತ್ರಿ ಗ್ರಾಹಕರಿಗೆ ವಿತರಿಸಲು ಸಿದ್ದಪಡಿಸಲಾಗಿದ್ದ ರೈಸ್ ಬಾತ್ ಅನ್ನು ಸೇವಿಸಿ ಗುಣಮಟ್ಟದ ಪರಿಶೀಲಿಸಿದರು.

ಪ್ರತಿದಿನ ಟೋಕನ್ ವಿತರಿಸಬೇಕು ಆ ಪ್ರಕಾರವೇ ಆಹಾರ ನೀಡಬೇಕು, ಆಹಾರದಲ್ಲಿ ಗುಣಮಟ್ಟ, ನಿಗದಿತ ಪ್ರಮಾಣ,ಶುಚಿತ್ವ ಕಾಪಾಡಿ ಕೊಳ್ಳಬೇಕು. ಎಲ್ಲಿಯೂ ಲೋಪಗಳಾಗಾದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಸೂಚನೆ ನೀಡಿದರು.

ಬಳಿಕ ನಗರದ ತಾಯಿ‌ಮಕ್ಕಳ ಆಸ್ಪತ್ರೆ ಹಾಗೂ ತುರ್ತು ನಿಗಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯರ ಆರೋಗ್ಯ ವಿಚಾರಸಿ, ಚಿಕಿತ್ಸೆ ಹೇಗೆ ನೀಡಲಾಗುತ್ತಿದೆ? ವೈದ್ಯಕೀಯ ಸೇವೆ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಕಲೆ ಹಾಕಿದರು.

ತೀವ್ರತರ ಮಕ್ಕಳ ನಿಗಾ ಘಟಕ, ಅಪೌಷ್ಟಿಕತೆ ಮಕ್ಕಳ ನಿರ್ವಹಣೆ ವಿಭಾಗಕ್ಕೆ ಭೇಟಿ ಕೊಟ್ಟು ಅಪೌಷ್ಟಿಕತೆ ನಿವಾರಣೆಗೆ ಅನುಸರಿಸಲಾಗುತ್ತಿರುವ ವಿಧಾನಗಳ ಬಗ್ಗೆ ಡಿಸಿ ಶಿಲ್ಪಾನಾಗ್ ಮಾಹಿತಿ ಪಡೆದರು.  ತದ ನಂತರ ನಗರದ  ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿದ ಶಿಲ್ಪನಾಗ್, ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿ ಆಹಾರ ಪದಾರ್ಥಗಳ ದಾಸ್ತಾನು ವೀಕ್ಷಣೆ ಮಾಡಿದರು. ವಿದ್ಯಾರ್ಥಿನಿಯರಿಗೆ ಸಿದ್ದ ಮಾಡಿದ್ದ ಊಟದ ರುಚಿ ನೋಡಿ ಗುಣಮಟ್ಟ ಪರಿಶೀಲಿಸಿ, ವಿದ್ಯಾರ್ಥಿನಿಯರ ಅಹವಾಲುಗಳನ್ನು ಆಲಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ, ಡಾ.ಮಹೇಶ್, ಡಾ.ಕೃಷ್ಣ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದಶಕರಾದ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಹನೂರಿನಲ್ಲಿ ಆತಂಕ ಮೂಡಿಸಿದ ಕಪ್ಪುಚುಕ್ಕಿ ರೋಗ: ಡಿಸಿ ಶಿಲ್ಪನಾಗ್ ಭೇಟಿ

ಇನ್ನು ಹನೂರಿನ ಜನರಲ್ಲಿ ಕಪ್ಪುಚುಕ್ಕಿ ರೋಗ ಆತಂಕ ಮೂಡಿಸಿದ್ದು,  ಹನೂರು ಭಾಗದ ಕಾಡಂಚಿನ ಗ್ರಾಮದ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನ ಡಿಸಿ ಶಿಲ್ಪನಾಗ್  ಭೇಟಿ ಮಾಡಿ ಖುದ್ದು ಆರೋಗ್ಯ ವಿಚಾರಿಸಿದರು. ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿಗಳಿಗೆ  ಭೇಟಿ ನೀಡಿದರು.

ಹಲವು ವರ್ಷಗಳಿಂದಲೂ ಸಾಮಾನ್ಯವಾಗಿ 5 ರಿಂದ 15 ವರ್ಷದ ಒಳಗೆ ಇರುವ ಮಕ್ಕಳಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ವಿಚಿತ್ರ ಕಾಯಿಲೆ  ಹಲವು ಮಕ್ಕಳನ್ನ ಸಾವಿಗೂ ದೂಡಿದೆ. ಹೀಗಾಗಿ  ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಭೇಟಿ ಮಾಡಿ ಖುದ್ದು ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಶಿಲ್ಪನಾಗ್ ಸೂಚನೆ ನೀಡಿದರು.

ಔಷಧಿ ಇಲ್ಲದ ಕಾಯಿಲೆಗೆ ತುತ್ತಾಗಿ ಮಕ್ಕಳು ಸಾವನ್ನಪ್ಪುತ್ತಾರೆ ಆರಂಭದಲ್ಲೇ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಸಹಕರಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಶಿಲ್ಪನಾಗ್ ಈ ವಿಚಿತ್ರ ಕಾಯಿಲೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

Key words: Chamarajanagar-DC-Shilpanag – visit – hospital- Indira canteen- hostels-inspection.