Saturday, September 12, 2026

BDA Apartments

ಜಾತಿ ನಿಂದನೆ ಮಾಡಿದ್ದು ಸರಿಯಲ್ಲ :ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟ...
Home Front Page ಜಾತಿ ನಿಂದನೆ ಮಾಡಿದ್ದು ಸರಿಯಲ್ಲ :ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ- ಆರ್.ಧೃವನಾರಾಯಣ್ ಕಿಡಿ.

ಜಾತಿ ನಿಂದನೆ ಮಾಡಿದ್ದು ಸರಿಯಲ್ಲ :ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ- ಆರ್.ಧೃವನಾರಾಯಣ್ ಕಿಡಿ.

ಮೈಸೂರು,ಜೂನ್,2,2021(www.justkannada.in): ಡಿಎಚ್ಓ ಅವರನ್ನ ಜಾತಿ ನಿಂದನೆ ಮಾಡಿರೋದು ಸರಿಯಲ್ಲ. ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಎಸ್.ಟಿ ಸೋಮಶೇಖರ್ ಯೋಗ್ಯರಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಕಿಡಿಕಾರಿದರು.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ಆರ್.ಧೃವನಾರಾಯಣ್, ಎಸ್.ಟಿ ಸೋಮಶೇಖರ್ ಬಿಜೆಪಿಗೆ ಮಾತ್ರ ಉಸ್ತುವಾರಿ ಸಚಿವ. ಕೋವಿಡ್ ನಿಯಂತ್ರಣದಲ್ಲಿ  ಕಾಂಗ್ರೆಸ್ ನಾಯಕರ ಮಾತಿಗೆ ಮನ್ನಣೆ ಇಲ್ಲ.  ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಶಾಸಕಾಂಗ ಹಾಗೂ ಕಾರ್ಯಾಂಗ ವಿಫಲವಾಗಿದೆ.  ಸ್ವತಃ ಆಡಳಿತ ಪಕ್ಷದ ಎಂಎಲ್ಸಿ ವಿಶ್ವನಾಥ್ ಅವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಯಾವೋಬ್ಬ ಬಿಜೆಪಿ ನಾಯಕರೂ ಪ್ರತಿಕ್ರಿಯಿಸಿಲ್ಲ. ಉಸ್ತುವಾರಿ ಸಚಿವರು ಎಲ್ಲರನ್ನು ಗಣನೆಗೆ ತೆಗೆದುಕೊಂಡು‌ ಕೆಲಸ ಮಾಡ್ತಿಲ್ಲ ಎಂದು ಆರೋಪಿಸಿದರು.

ಡಿಎಚ್ ಓ ಅವರನ್ನ ಜಾತಿ ನಿಂದನೆ ಮಾಡಿರೋದು ಸರಿಯಲ್ಲ. ಮಂತ್ರಿಯಾಗಿ ಮುಂದುವರೆಯುವ ನೈತಿಕತೆ ಜಿಲ್ಲಾ ಉಸ್ತುವಾರಿ ಸಚಿವರಿಗಿಲ್ಲ. ಅಧಿಕಾರಿಗಳನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು. ತಪ್ಪು ಮಾಡಿದ್ದಲ್ಲಿ ಸಸ್ಪೆನ್ಡ್ ಮಾಡಿ ಅಥವಾ ಕಾನೂನು ರೀತಿ ಕ್ರಮ ತೆಗೆದುಕೊಳ್ಳಿ. ಜಾತಿ ನಿಂದನೆ ಮಾಡಿದ್ದು ಸರಿಯಲ್ಲ, ಇದನ್ನ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅನುಭವದ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಬಹಿರಂಗವಾಗಿ ಕಿತ್ತಾಡೊದು ಎಷ್ಟು ಸರಿ..?

ಸಂಸದ ಪ್ರತಾಪ್ ಸಿಂಹ ಮತ್ತು ಮೈಸೂರು ಡಿಸಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಕುರಿತು ಹರಿಹಾಯ್ದ ಮಾಜಿ ಸಂಸದ ಆರ್.ಧೃವನಾರಾಯಣ್, ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಿತ್ತಾಟ ನೋಡಿಲ್ಲ. ಅಧಿಕಾರಗಳು ಹಾಗೂ ಜನಪ್ರತಿನಿಧಿಗಳ ಜಗಳದಿಂದ ಮೈಸೂರಿನ ಮರ್ಯಾದೆ ಹೋಗ್ತಿದೆ. ಮೈಸೂರು ವಿಶ್ವದಲ್ಲೇ ಹೆಸರುವಾಸಿಯಾದ ನಗರ. ಜಿಲ್ಲೆಯಲ್ಲಿ ಹಲವು ನಾಯಕರು, ಅಧಿಕಾರಿಗಳು ಅವರದ್ದೇ ಆದ ಕೊಡುಗೆ ನೀಡಿ ಹೋಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಹಿಂದಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶ್ರಮ ಇದೆ. ಇಂತಹ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನನಾಯಕರ ಆರೋಪ ಪ್ರತ್ಯಾರೋಪ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೋವಿಡ್ ನಿಯಂತ್ರಣದ ಖರ್ಚು ವೆಚ್ಚ ಹಾಗೂ ಟೆಂಡರ್ ದಾರರ ಬಹಿರಂಗ ಪಡಿಸಿ.

ಬೆಂಗಳೂರು ಹೊರತುಪಡಿಸಿದ್ರೆ ಮೈಸೂರಿನಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್ ದಾಖಲಾಗ್ತಿದೆ. ಇಂತಹ ಸಂದರ್ಭದಲ್ಲಿ ಇಬ್ಬರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನ ಬಿಟ್ಟು ಹೀಗೆ ಬಹಿರಂಗವಾಗಿ ಕಿತ್ತಾಡೊದು ಎಷ್ಟು ಸರಿ..? ಪ್ರತಿದಿನ ಸಂಸದರು, ಶಾಸಕರ ಹೇಳಿಕೆ ಹಾಗೂ ಜಿಲ್ಲಾಧಿಕಾರಿಗಳ ಉತ್ತರ ಇದೇ ಆಗ್ತಿದೆ. ಆಡಳಿತ ಪಕ್ಷದ ನಾಯಕರು ಅಧಿಕಾರಿಗಳ ಶೀತಲ ಸಮರದ  ಸತ್ಯ ಹೊರಬರಬೇಕು. ಇಬ್ಬರೂ ಈ ರೀತಿ ಕಿತ್ತಾಡ್ತಿರೋದು ನೋಡಿದ್ರೆ ಭ್ರಷ್ಟಾಚಾರದ ವಾಸನೆ ಬರ್ತಿದೆ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣದ ಖರ್ಚು ವೆಚ್ಚ ಹಾಗೂ ಟೆಂಡರ್ ದಾರರ ಬಹಿರಂಗ ಪಡಿಸಿ. ಸ್ಟೆಪ್ ಡೌನ್ ಆಸ್ಪತ್ರೆ ರದ್ದು ಮಾಡಿದ್ದ ಬಗ್ಗೆ ವರದಿ ನೀಡಿ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಧೃವನಾರಾಯಣ್ ಆಗ್ರಹಿಸಿದರು.

ಸಂಸದ ಪ್ರತಾಪಸಿಂಹ ಸಾರ್ವಜನಿಕರ ಹಣದ ಮಾಹಿತಿ ಕೇಳೋದು ತಪ್ಪಿಲ್ಲ. ಆದರೆ ಕೇಂದ್ರ ಸರ್ಕಾರ ಕೊಟ್ಟ ಅನುದಾನದ ಲೆಕ್ಕವನ್ನು ಕೇಳಿ. ಡಿಸಿ ಅವರ ಸ್ವಿಮ್ಮಿಂಗ್ ಪೂಲ್ ಲೆಕ್ಕವನ್ನು ಕೇಳಿ. ಈ ಕಾಲದಲ್ಲಿ ಸ್ವಿಮ್ಮಿಂಗ್‌ಪೂಲ್ ಅವಶ್ಯಕತೆ ಇರಲಿಲ್ಲ. ಇದರ ಜೊತೆಗೆ ಅದನ್ನು ಕೇಳಿ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಈ ರೀತಿ ವಾತಾವರಣ ಆಗಿದೆ. ಸಚಿವ ಸೋಮಶೇಖರ್ ಅವರಿಗೆ ಅಧಿಕಾರ ಮಾಡುವ ಶಕ್ತಿಯಿಲ್ಲ. ನಿಮ್ಮ ಆಡಳಿತ ವೈಖರಿ ಕೆಲಸದಲ್ಲಿ ತೋರಿಸಿ. ಕೇವಲ ಪ್ರವಾಸ ಮಾಡಿದರೆ ಸಾಕಾಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್  ಟೀಕಿಸಿದರು.

ಅಮಿಶ್ ಶಾ ಮೋದಿಗೆ ಬಿಜೆಪಿ ನಾಯಕರು ಗುಲಾಮರಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಗುಲಾಮಗಿರಿಯ ಸಂಕೇತ ಎಂದು ವಾಗ್ದಾಳಿ ನಡೆಸಿದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಗೆ ತಿರುಗೇಟು ನೀಡಿದ ಆರ್ ಧೃವನಾರಾಯಣ್, ಅಮಿಶ್ ಶಾ ಮೋದಿಗೆ ಬಿಜೆಪಿ ನಾಯಕರು ಗುಲಾಮರಾಗಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ.? ರವಿಯವರಿಗೆ ಅಜ್ಞಾನ ತುಂಬಿದೆ. ಇಬ್ಬರೂ ಒಟ್ಟಿಗೆ ಶಾಸಕರಾದವರು. ಅಭಿವೃದ್ಧಿ ಅಂತಾ ಓಡಾಡಬೇಡ,  ಜನ ಇದನ್ನು ನೋಡಲ್ಲ ಅಂತಿದ್ದವರು. ದತ್ತಪೀಠದ ಬಗ್ಗೆ ವರ್ಷಕ್ಕೊಮ್ಮೆ ಮಾತಾಡಿದರೆ ಸಾಕು ಗೆಲ್ಲುತ್ತೇನೆ ಅಂದಿದ್ದರು. ಬಿಜೆಪಿಯವರು ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡುವುದು ಸಾಮಾನ್ಯ ಎಂದು ಟೀಕಿಸಿದರು.

ಬಿ ವೈ ವಿಜಯೇಂದ್ರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಬಿಜೆಪಿ ಭಂಡ ಸರ್ಕಾರ  ಕೋರ್ಟ್ ಆದೇಶಗಳಿಗೂ ಕಿಮ್ಮತ್ತು ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಸಿಎಂ ಅವರ ತಂದೆ ಅಂತಾ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಜಯೇಂದ್ರ ವಿರುದ್ದ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ. ಈ‌ ಪ್ರಕರಣದಲ್ಲಿ ಜಿಲ್ಲಾಧಿಕಾರಿಯವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ವಿರುದ್ದವೂ ಕ್ರಮಕೈಗೊಳ್ಳಿ. ಯಾವ ಯಾವ ಅಧಿಕಾರಿ‌ ಲೋಪವೆಸಗಿದ್ದಾರೆ ಕ್ರಮಕೈಗೊಳ್ಳಿ. ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಆರ್.ಧೃವನಾರಾಯಣ್ ಹೇಳಿದರು.

Key words: Caste abuse -ST Somashekhar -not fit – continue – minister-R. Dhruvanarayan –mysore