ಈ ಸಾಲಿನ ಬಜೆಟ್ ಗಾತ್ರ ಶೀಘ್ರ ನಿರ್ಧಾರ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ 15, 2023 (www.justkannada.in): ಈ ಸಾಲಿನ ಆಯವ್ಯಯದ ಗಾತ್ರದ ಬಗ್ಗೆ ತೀರ್ಮಾನ ಮಾಡುವುದಕ್ಕೆ ಹಲವು ಸಭೆಗಳ ಅವಶ್ಯಕತೆ ಇದೆ. ಬೇರೆ ಬೇರೆ ಇಲಾಖೆಗಳ ಜೊತೆ ಸಭೆ ಆಗಬೇಕಿದ್ದು, ಸಂಕ್ರಾಂತಿ ನಂತರ ಸಭೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿಎಂ,  ಇಂದಿನ ಹಣಕಾಸಿನ ಮತ್ತು ಮುಂದಿನ ಡಿಸೆಂಬರ್‌ವರೆಗಿನ ಸ್ಥಿತಿಗತಿ ನೋಡಿಕೊಂಡು ಬಜೆಟ್ ಮಂಡಿಸಲಾಗುವುದು. ಈ ಸಂಬಂಧ ಹತ್ತು ದಿನಗಳ ಹಿಂದೆಯೇ ಪ್ರಮುಖವಾದ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ ತಿಂಗಳವರೆಗೆ ಆದಾಯ ಸಂಗ್ರಹ ಮಾಡಲಾಗುವುದು. ನಮ್ಮ ನಿರೀಕ್ಷೆಗೆ ಮೀರಿ ಆದಾಯ ಬರುತ್ತಿದೆ. ಅಬಕಾರಿ, ವಾಣಿಜ್ಯ, ಸ್ಟಾಂಪ್ ಡ್ಯೂಟಿ ಸೇರಿದಂತೆ ಇತರೆ ತೆರಿಗೆ ಸಂಗ್ರಹ ಆಗುತ್ತಿದೆ ಎಂದಿದ್ದಾರೆ.