ಬಿಜೆಪಿ ಪಟ್ಟು ಹಿನ್ನೆಲೆ: ಗುರುವಾರಕ್ಕೆ ವಿಧಾನಸಭೆ ಕಲಾಪ ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್..

ಬೆಂಗಳೂರು,ಜು,15,2019(www.justkannada.in):  ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಸಮಯ ನಿಗದಿಯಾಗಿದ್ದು, ಅಲ್ಲಿವರೆಗೆ ಸದನ ನಡೆಸದಂತೆ ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆ ವಿಧಾನಸಭೆ ಕಲಾಪವನ್ನ ಗುರುವಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು.

ವಿಧಾನಸೌಧದಲ್ಲಿ ಸ್ಪೀಕರ್ ನೇತೃತ್ವದಲ್ಲಿ ನಡೆದ ಕಲಾಪ ಸಲಹ ಸಮಿತಿ ಸಭೆಯಲ್ಲಿ ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ನಿರ್ಧಾರ ಮಾಡಲಾಗಿತ್ತು. ಸಭೆಯಲ್ಲಿ  ಗುರುವಾರದವರೆಗೂ ವಿಧಾನಮಂಡಲ ಕಲಾಪ ನಡೆಸದಂತೆ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಪಟ್ಟು ಹಿಡಿದರು.  ಅಲ್ಲದೆ ಸದನ ನಡೆದರೇ ಬಿಜೆಪಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಪಟ್ಟು ಹಿಡಿದ ಹಿನ್ನೆಲೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ಶುಕ್ರವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಪಕ್ಷ ನಾಯಕರು ಭಾಗಿಯಾಗಿರಲಿಲ್ಲ. ಹೀಗಾಗಿ ಅಂದು ವಿಶ್ವಾಸ ಮತಯಾಚನೆಗೆ ಸಮಯ ನಿಗದಿ ಮಾಡಲು ಆಗಲಿಲ್ಲ. ಇಂದು ನಡೆದ ಸಭೆಯಲ್ಲಿ ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಲಾಗಿದೆ. ಅಲ್ಲಿವರೆಗೆ  ಸದನ ಕಲಾಪ ನಡೆಸದಂತೆ ಬಿಜೆಪಿ ಬೇಡಿಕೆ ಇಟ್ಟಿದೆ. ಅದ್ದರಿಂದ ಗುರುವಾರಕ್ಕೆ ಸದನ ಕಲಾಪ ಮುಂದೂಡಿಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

Key words: BJP –demands-Speaker -Ramesh Kumar -adjourned – assembly – Thursday.