ಕೆಆರ್ ಎಸ್ ಜಲಾಶಯಕ್ಕೆ ಬಿಜೆಪಿ ನಿಯೋಗ ಭೇಟಿ: ನೀರಿನ ಮಟ್ಟದ ವಾಸ್ತವಸ್ಥಿತಿ ಪರಿಶೀಲನೆ

ಮಂಡ್ಯ,ಸೆಪ್ಟಂಬರ್,8,2023(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಜಲಾಶಯಗಳು ಭರ್ತಿಯಾಗದಿದ್ದರೂ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಿದ ಹಿನ್ನೆಲೆ ಇಂದು ಬಿಜೆಪಿ ನಿಯೋಗ ಕೆಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಭೇಟಿ ನೀಡಿತು. ಈ ವೇಳೆ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಗೋಪಾಲಯ್ಯ, ಆರ್.ಅಶೋಕ್, ಸಂಸದೆ ಸುಮಲತಾ ಅಂಬರೀಶ್ ಉಪಸ್ಥಿತರಿದ್ದರು.

ಕೆಆರ್ ಎಸ್ ಜಲಾಶಯದ ವಾಸ್ತವಸ್ಥಿತಿ ಅರಿಯಲು ಇಂದು ಬಿಜೆಪಿ ನಿಯೋಗ ಭೇಟಿ ನೀಡಿತ್ತು. ಈ ನಡುವೆ ಮಾಧ್ಯಮದವರನ್ನ ಬಿಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, ಮಾಧ್ಯಮದವರನ್ನು ಬಿಡದಿರುವುದು ಸಂಶಯ ಮೂಡಿಸುತ್ತಿದೆ. ಆದೇಶಕ್ಕಿಂತಲೂ ಹೆಚ್ಚುವರಿ ನೀರು ತಮಿಳುನಾಡಿಗೆ ಬಿಟ್ಟಿದ್ದಾರೆ. ಹೆಚ್ಚು ನೀರು ಹರಿಸಿದ್ದರಿಂದಲೇ ಮಾಧ್ಯಮದವರಿಗೆ ಬಿಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ  ನಡೆಸಿದರು.

Key words: BJP- delegation- visits- KRS- reservoir