ಯುವಕನ ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.

ಮೈಸೂರು,ಮೇ,23,2022(www.justkannada.in): ಇತ್ತೀಚೆಗೆ ನಡೆದಿದ್ದ ಯುವಕನ ಕೈಗೆ ಮಗು ಕೊಟ್ಟು ಮಹಿಳೆ ನಾಪತ್ತೆ ಪ್ರಕರಣಕ್ಕೆ ಇದೀಗ  ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೇಮಿಗಳು ಪ್ರೀತಿಗೆ ಮಗು ಅಡ್ಡಿಯಾಗುತ್ತದೆ ಎಂದು ಮಗು ನಾಟಕವಾಡಿರುವುದು ಬಯಲಾಗಿದೆ.

ಮಗುವನ್ನೇ ಅನಾಥ ಮಗು ಎಂದು ಖತರ್ನಾಕ್ ಪ್ರೇಮಿಗಳು ಬಿಂಬಿಸಿದ್ದು, ಇದೀಗ ಲಷ್ಕರ್ ಠಾಣಾ ಪೊಲೀಸರಿಗೆ ಚಾಲಾಕಿ ಪ್ರೇಮಿಗಳು ತಗಲಾಕಿಕೊಂಡಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಯುವಕ ರಘು ಮೇ.9 ರಂದು ಮೈಸೂರಿ‌ ಲಷ್ಕರ್ ಪೊಲೀಸ್ ಠಾಣೆಗೆ ಆಗಮಿಸಿ ಕಥೆ ಕಟ್ಟಿದ್ದ

ಅಪರಿಚಿತ ಮಹಿಳೆ ರಾಯಚೂರು ಬಸ್ ಸ್ಟ್ಯಾಂಡ್ ನಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾದಳು. ದಾರಿ ಕಾಣದೆ ಮೈಸೂರಿಗೆ ತಂದಿರುವುದಾಗಿ ಕಥೆ ಕಟ್ಟಿ ಪೊಲೀಸರನ್ನ ನಂಬಿಸಿದ್ದ. ಮಗುವಿನ ಪರಿಸ್ಥಿತಿಗೆ ಮರುಗಿದ ಪೊಲೀಸರು ಆರೈಕೆ ಮಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಬಳಿಕ ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಿದೆ.

ತನ್ನ ಪ್ರಿಯತಮೆಯ ಮಗುವನ್ನ ಅನಾಥ ಮಗುವೆಂದು ಬಿಂಬಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.  ತಮ್ಮ ಪ್ರೀತಿಗೆ ಅಡ್ಡಿಯಾದ ಮಗುವನ್ನ ದೂರ ಮಾಡಲು ಕಳ್ಳ ಪ್ರೇಮಿಗಳು ನಾಟಕವಾಡಿದ್ದಾರೆ. ರಾಯಚೂರಿನ ವಿವಾಹಿತ ಮಹಿಳೆಯನ್ನ ಇನ್ಸ್ಟಾಗ್ರಾಮ್ ನಲ್ಲಿ ರಘು ಪರಿಚಯ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಇಬ್ಬರ ನಡುವೆ ಒಡನಾಟವಿತ್ತು.ಇವರ ಅನೈತಿಕ ಸಂಬಂಧ ಮಹಿಳೆಯ ಪತಿ ಯೇಸುರಾಜ್ ಗೆ ಗೊತ್ತಾಗಿತ್ತು.

ರಘು ಕುಮ್ಮಕಿನಿಂದ ಪತಿಯಿಂದ ಬೇರ್ಪಡಲು ಮಹಿಳೆ ಸಿದ್ದವಾಗಿದ್ದು, ತಮ್ಮಿಬ್ಬರ ಪ್ರೀತಿಗೆ ಅಡ್ಡವಾಗಿದ್ದ ಮಗುವನ್ನ ದೂರ ಮಾಡಿಲು ಪ್ಲಾನ್ ಮಾಡಿದ್ದರು. ಬಸ್ ಸ್ಟ್ಯಾಂಡ್  ನಲ್ಲಿ ಅಪರಿಚಿತ ಮಹಿಳೆ ಕೊಟ್ಟು ನಾಪತ್ತೆಯಾದ್ಲು ಎಂಬ ಕಥೆ ಹಣೆದಿದ್ದರು. ಯೇಸುರಾಜ್ ರನ್ನ ಲಷ್ಕರ್ ಠಾಣಾ ಪೊಲೀಸರು ಸಂಪರ್ಕಿಸಿದಾಗ ನಿಜಾಂಶ ಬಯಲಾಗಿದೆ. ಇದೀಗ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಅತಿಥಿಯಾಗಿದ್ದಾಳೆ. ಸದ್ಯ ಮಗು ಬಾಪೂಜಿ ಚಿಲ್ಡ್ರನ್ ಕೇಂದ್ರದ ವಶದಲ್ಲಿದೆ. ಸದ್ಯ ಕಳ್ಳ ಪ್ರೇಮಿಗಳ ಮೇಲೆ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Big twist –mysore-boy-tumkura-child- case