ಜಿಲ್ಲೆ ಪುನರ್ವಿಂಗಡಣೆ ಪರ ಬ್ಯಾಟಿಂಗ್: ಸಂಪುಟ ವಿಸ್ತರಣೆಯಾದರೆ ಒಳ್ಳೆಯದ್ದು ಎಂದ್ರು ಡಿಸಿಎಂ ಅಶ್ವಥ್ ನಾರಾಯಣ್…

ಮೈಸೂರು,ಸೆ,20,2019(www.justkannada.in): ವಿಜಯನಗರ ಸಾಮ್ರಾಜ್ಯದ ಕೊಡುಗೆ ಅಪಾರವಾದದ್ದು. ಆ ಗೌರವವನ್ನು ಗಮನದಲ್ಲಿಟ್ಟುಕೊಂಡು ವಿಜಯನಗರ ಜಿಲ್ಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಹೇಳುವ ಮೂಲಕ ಡಿಸಿಎಂ ಅಶ್ವಥ್ ನಾರಾಯಣ್  ಜಿಲ್ಲೆ ಪುನರ್ವಿಂಗಡಣೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ ಬಳ್ಳಾರಿ ವಿಭಜನೆ  ಬಗ್ಗೆ ಸಮರ್ಥಿಸಿಕೊಂಡ ಡಿಸಿಎಂ ಅಶ್ವತ್ಥ ನಾರಾಯಣ್, ಬೆಳಗಾವಿ ಜಿಲ್ಲೆಯನ್ನೂ ವಿಭಜಿಸುವ ಪ್ರಸ್ತಾವನೆ ಇದೆ. ಈಗ ಬಳ್ಳಾರಿ ವಿಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಹಂತ ಹಂತವಾಗಿ ಜಿಲ್ಲೆಗಳ ವಿಭಜನೆಯನ್ನೂ ಪರಿಗಣಿಸಲಾಗುವುದು. ಮುಂದಿನ ಹಂತದಲ್ಲಿ ಬೆಳಗಾವಿ ಜಿಲ್ಲೆಯ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.

ಸಂಪುಟ ವಿಸ್ತರಣೆಯಾದರೆ ಒಳ್ಳೆಯದ್ದು. ನೆರೆ ಪರಿಹಾರ ವಿಚಾರದಲ್ಲಿ ಎಲ್ಲ ರೀತಿಯ ಕೆಲಸ ಆಗುತ್ತಿದೆ. ಈಗಲೂ ಯಾವುದೇ ತೊಂದರೆ ಆಗಿಲ್ಲ. ಆದರೆ ಪೂರ್ಣ ಪ್ರಮಾಣದ ಸಂಪುಟ ಇದ್ದರೆ ಒಳೆಯದ್ದು. ಈ ನಿಟ್ಟಿನಲ್ಲಿ ನಮ್ಮ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

17 ಅನರ್ಹ ಶಾಸಕರ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ನಮ್ಮೆಲ್ಲ ಸ್ನೇಹಿತರೂ ನಮ್ಮ ಜತೆ ಇದ್ದಾರೆ‌. ಯಾರಿಗೂ ಅಸಮಾಧಾನ ಇಲ್ಲ ಎಂದು ತಿಳಿಸಿದರು.

ನೆರೆಪರಿಹಾರ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ಮನೆ ಕಟ್ಟಿಸಿಕೊಡಲು ಐದುನೂರು ಕೋಟಿ ಬಿಡುಗಡೆ ಆಗಿದೆ. ಈಗಾಗಲೇ ಮನೆಗಳನ್ನು ಕಟ್ಟಿಸಿಕೊಡುವ ಕೆಲಸ ನಡೆಯುತ್ತಿದೆ. ಈ ಹಿಂದೆ ಇದ್ದ ಸರ್ಕಾರಗಳು ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಳ್ಳಲು ಒಂದುವರೆ ಲಕ್ಷ ಕೊಡ್ತಿತ್ತು. ನಾವು ಐದು ಲಕ್ಷ ರೂಪಾಯಿ ಕೊಡುತಿದ್ದೇವೆ. ಕಾಂಗ್ರೆಸ್  ನವರು ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ದಾರೆ. ಈ ಹಿಂದೆ ಇದ್ದ ಸರ್ಕಾರಗಳು ಎಷ್ಟು ನೆರೆ ಪರಿಹಾರ ಬಿಡುಗಡೆ ಮಾಡಿವೆ. ಎಷ್ಟರ ಮಟ್ಟಿಗೆ ಕೆಲಸ ಆಗಿದೆ ಅನ್ನೋ ವಿಚಾರ ನೀವೆ ಗಮನಿಸಿ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

ನೆರೆಯಿಂದಾಗಿ ಹಾಳಾಗಿರುವ ಸರ್ಕಾರಿ ಕಟ್ಟಡಗಳು ಕಾಮಗಾರಿ ನಡೆಯುತ್ತಿದೆ. ಈಗಾಗಲೇ ನೆರೆ ಪರಿಹಾರವಾಗಿ  ಜಿಲ್ಲಾಧಿಕಾರಿಗಳಿಗೆ ಸಾವಿರ ಕೋಟಿ ಬಿಡುಗಡೆ ಆಗಿದೆ. ಲೋಕೋಪಯೋಗಿ ಇಲಾಖೆಯಿಂದ‌ ಹೆಚ್ಚುವರಿಯಾಗು ಐದು ನೂರು ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು  ಡಿಸಿಎಂ ಡಾ.ಸಿ.ಎನ್ ಅಶ್ವತ್ಥನಾರಾಯಣ  ಮಾಹಿತಿ ನೀಡಿದರು.

Key words: Batting – District –Redistribution- DCM- Ashwath Narayan -mysore