ಕೊರೊನಾ ಸಮಯದಲ್ಲಿ ಬಸವಣ್ಣನ ‘ದಾಸೋಹ’ ಆದರ್ಶವಾಗಿದೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು ,ಏಪ್ರಿಲ್ 22,2020: ಜಗಜ್ಯೋತಿ ಬಸವೇಶ್ವರರ ಸಂದೇಶ ಎಲ್ಲ ಕಾಲಕ್ಕೂ ಪ್ರಸ್ತುತ ಎಂಬುದಕ್ಕೆ ಕೊರೊನಾ ಸಮಯದಲ್ಲಿ ಅವರ ದಾಸೋಹ ಕಾರ್ಯ ಮುಂದುವರಿಯುತ್ತಿರುವುದೇ ಉದಾಹರಣೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಸವ ಜಯಂತಿ ಪ್ರಯುಕ್ತ ನಗರದ ರಾಮಯ್ಯ ಸರ್ಕಲ್‌ ಬಳಿಯ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬಡ ಜನರಿಗೆ ದಿನಸಿ ಕಿಟ್‌ ವಿತರಿಸಿ, ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿಕೊಟ್ಟವರು ಅಣ್ಣ ಬಸವಣ್ಣ. ಕೊರೊನಾ ಸಂಕಷ್ಟದಲ್ಲಿ ಜನರು, ಬಸವಣ್ಣನ ಮಾತಿನಂತೆ ದಾಸೋಹ ಕಾರ್ಯ ನಡೆಸುತ್ತಿದ್ದಾರೆ. ಬಸವೇಶ್ವರರು ಸಾರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಇತತರಿಗೆ ಮಾದರಿಯಾಗಿದ್ದಾರೆ. ಬಸವಣ್ಣನವರ ಪ್ರೇರಣೆ ಸದಾ ಕಾಲ ಇರಲಿ,”ಎಂದು ಅವರು ಆಶಿಸಿದರು.

“ಕನ್ನಡ ನಾಡು ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ಬಸವ ಜಯಂತಿ ಆಚರಿಸಲಾಗುತ್ತಿದೆ. ಬಸವಣ್ಣನವರು ಮನುಕುಲಕ್ಕೆ ನೀಡಿದ ಸಂದೇಶವನ್ನು ನಮ್ಮ ಜೀವನ, ಸಮಾಜ, ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರೆ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳೇ ಇರದು. ನಮ್ಮ ಬದುಕು ಮತ್ತಷ್ಟು ಅರ್ಥಪೂರ್ಣವಾಗಿ, ಪ್ರೀತಿ, ವಿಶ್ವಾಸ, ಸುಖ, ಸಮೃದ್ಧಿಯಿಂದ ಕೂಡಿರುತ್ತದೆ. ತಾರತಮ್ಯ ರಹಿತವಾದ ಸಮಾಜವನ್ನು ಕಾಣಲು ಸಾಧ್ಯ,” ಎಂದು ಅವರು ಹೇಳಿದರು.

“ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಅಳವಡಿಸಿಕೊಂಡಾಗ ಎಲ್ಲರಿಗೂ ಸಲ್ಲುವಂಥ ‘ಹಸಿವು ಮುಕ್ತ’ ‘ಜಾತ್ಯತೀತ ಸಮಾಜ’ ಕಟ್ಟಬಹುದು. ಅವರ ಸಂದೇಶ ಎಲ್ಲ ಸಮಾಜಕ್ಕೂ ಎಲ್ಲ ಕಾಲಕ್ಕೂ ಪ್ರಸ್ತುತ. ಅವರ ಮಾತುಗಳನ್ನು ಪಾಲಿಸಿ ಅವರಿಗೆ ಗೌರವ ಸಲ್ಲಿಸೋಣ,” ಎಂದರು.

ಈ ಸಂದರ್ಭದಲ್ಲಿ ಅರಮನೆ ವಾರ್ಡ್‌ನ ಪಾಲಿಕೆ ಸದಸ್ಯೆ ಸುಮಂಗಲ ಕೇಶವ್‌ ಉಪಸ್ಥಿತರಿದ್ದರು.