ಬ್ಯಾಂಕ್ ಸಾಲ ವಸೂಲಾತಿ ಕಿರುಕುಳ: ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿ ರೈತರಿಂದ ಪ್ರತಿಭಟನೆ.

ಮೈಸೂರು,ಜೂನ್,17,2022(www.justkannada.in): ರೈತರ ಸಾಲ ವಸೂಲಿಗಾಗಿ ನೋಟಿಸ್ ನೀಡುವುದು ಮತ್ತು ಒತ್ತಡ ಹೇರುವುದು, ನ್ಯಾಯಾಲಯಕ್ಕೆ ಮೊಕದ್ದಮೆ ದಾಖಲಿಸುಹುದು, ಮುಗ್ಧ ರೈತರ ಸಾಲವನ್ನು ನವೀಕರಣ ಮಾಡುತ್ತೇನೆಂದು ಸಹಿ ಪಡೆದು ದುರುಪಯೋಗಪಡಿಸಿಕೊಂಡಿರುವುದು. ಸರ್ಕಾರದ ಯೋಜನೆಗಳ ಹಣ ಸಾಲಕ್ಕೆ ವಜಾ ಮಾಡಿಕೊಳ್ಳುವುದು ಇನ್ನು ಮತ್ತಿತರ ಸಮಸ್ಯೆಗಳ ಬಗ್ಗೆ ಆಕ್ರೋಶಗೊಂಡ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ರೈತರು, ಹೊಮ್ಮರಗಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್  ಅವರ ನೇತೃತ್ವದಲ್ಲಿ ಇಂದು ಎಚ್ ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಮ್ಯಾನೇಜರ್ ಗೆ ಧಿಕ್ಕಾರ ಕೂಗಿ, ಬೇಡವೇ ಬೇಡ ಬಲತ್ಕಾರ ವಸೂಲಾತಿ ಬೇಡ ಎಂದು ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಿದ  ರೈತರು, ಆಡಳಿತ ನಡೆಸುವ ಸರ್ಕಾರಗಳಿಗೆ  ಬಂಡವಾಳಶಾಹಿಗಳ  ಶ್ರೀಮಂತರ ಪರ ಇರುವ ಒಲವು ರೈತರ ಬಗ್ಗೆ ಇಲ್ಲ. ಕೊರೋನಾ ಸಂಕಷ್ಟ ಕಾಲದಲ್ಲಿ ಉದ್ಯಮಿಗಳಿಗೆ ನೆರವಾಗಲೆಂದು   ಹೆಚ್ಚುವರಿಯಾಗಿ ಶೇಕಡಾ 30ರಷ್ಟು ಹೆಚ್ಚುವರಿ ಸಾಲ ನೀಡಿದ್ದಾರೆ.  ಆದರೆ ರೈತರಿಗೆ ಸಾಲ ವಸೂಲಾತಿ ಗಾಗಿ ಕಿರುಕುಳ ನೀಡುತ್ತಿದ್ದಾರೆ.  ರೈತರು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು ಸ್ಥಳಕ್ಕೆ ಬಂದ ವ್ಯವಸ್ಥಾಪಕ ಗಣೇಶ್ ರವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.

ಹಿಂದಿನ ವ್ಯವಸ್ಥಾಪಕರು ರೈತರಿಂದ ಸಾಲ ನವೀಕರಿಸುವ ಸಹಿ ಪಡೆದು ರೈತರ ಗಮನಕ್ಕೆ ಬಾರದಂತೆ ಹೆಚ್ಚು ಸಾಲ ಬಿಡುಗಡೆ ಮಾಡಲಾಗಿದೆ ಎಂದು ರೈತರನ್ನು ವಂಚಿಸಿರುವುದು ಕಂಡುಬಂದಿದೆ.  ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ ವೇಳೆ ದೂರವಾಣಿ ಮೂಲಕ ವಿಭಾಗಿಯ ಕಾರ್ಯನಿರ್ವಾಹಕ ವ್ಯವಸ್ಥಾಪಕರು ಜುಲೈ 8ರಂದು ಬ್ಯಾಂಕಿನಲ್ಲಿ ಈ ಭಾಗದ ರೈತರೊಂದಿಗೆ ಸಭೆ ನಡೆಸಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.  ನಂತರ ಚಳುವಳಿಯನ್ನು ಕೈಬಿಡಲಾಯಿತು.

ಈ ಚಳುವಳಿಯಲ್ಲಿ ರಾಜ್ಯ ಕಬ್ಬು ಬೆಳಗಾರರ ಸಂಘದ ಪದಾಧಿಕಾರಿಗಳಾದ ಕೆಂಡಗಣ್ಣಸ್ವಾಮಿ, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ವೃಷಭೇಂದ್ರ, ಬಿಎಂ ಮಂಜು, ನಿಂಗಣ್ಣ, ಮಾದೇವಪ್ಪ, ಸ್ವಾಮಿಗೌಡ, ದೇವಮಣಿ, ಚಿರತೆ ರಾಜು, ಶೇಖರ್, ರಾಜೇಶ್, ನೂರಾರು ರೈತರು ಭಾಗವಹಿಸಿದ್ದರು.

Key words: Bank -loan- harassment-Protest -farmer