ದಶಪಥ ಯೋಜನೆ ನಿಮ್ಮದಲ್ಲ ‘ಮಿಸ್ಟರ್ ಪ್ರತಾಪ್ ಸಿಂಹ’, ಸುಳ್ಳು ಹೇಳೋದು ಬಿಡಿ ಎಂದ ವಿಶ್ವನಾಥ್

ಮೈಸೂರು, ಆಗಸ್ಟ್ 22, 2021 (www.justkannada.in): ಮಿಸ್ಟರ್ ಪ್ರತಾಪ್ ಸಿಂಹ ದಶಪಥ ಯೋಜನೆ ನಿಮ್ಮದಲ್ಲ ಎಂದು ಮೈಸೂರಿನಲ್ಲಿ ಎಂಎಲ್‌ಸಿ ವಿಶ್ವನಾಥ್ ಹೇಳಿದರು.

ಇದು ನಾನು ಎಂಪಿ ಆಗಿದ್ದ ವೇಳೆ ಡಿಪಿಆರ್ ಆಗಿತ್ತು. ಆ ವೇಳೆ ನಾನು, ಧ್ರುವನಾರಾಯಣ್, ರಮ್ಯ, ಡಿಕೆ ಸುರೇಶ್ ಈ ಬಗ್ಗೆ ಸಭೆಗೆ ಹೋಗಿದ್ದೇವು. ಕೇಂದ್ರದಲ್ಲಿ ಕುಳಿತು ಈ ಬಗ್ಗೆ ಡಿಪಿಆರ್ ಫೈನಲ್ ಮಾಡಿಸಿದ್ದೇವೆ. ಆದರೆ ಈಗ ಬಂದು ನಾನು ಮಾಡ್ದೆ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಇದರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಅವರ ಶ್ರಮವೂ ಇದೆ. ಅಂದಿನ ಸಿದ್ದರಾಮಯ್ಯರ ಸರ್ಕರದ ಪಾತ್ರವೂ ಇದರಲ್ಲಿದೆ. ಮಗು ಹುಟ್ಟಿದ ಬಳಿಕ ಬಿಟ್ಟು, ಶಾಲೆಗೆ ಹೋಗುವಾಗ ಮಗು ನಂದು ಎಂದರೆ ಹೇಗೆ? ಈ ಯೋಜನೆ ನಾವೇ ತಂದಿದ್ದು ಎಂದ ಸಂಸದ ಪ್ರತಾಪ್‌ ಸಿಂಹಗೆ ವಿಶ್ವನಾಥ್ ಟಾಂಗ್ ನೀಡಿದರು.

ಹಿಂದೆ ಇದ್ದ ಎಂ.ಪಿ, ಯುಪಿಎ ಸಿದ್ದರಾಮಯ್ಯ ಅವರ ಸಾಧನೆ ಇದು. ಪ್ರತಾಪಸಿಂಹ ಹೇಳಿಕೆ ಸರಿ ಅಲ್ಲ. ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪಾಪ ಆ ಹೆಣ್ಣು ಮಗಳು ಹೇಳಿದ್ದು ಸರಿ ಇದೆ. ಸಂಸದೆ ಸುಮಲತಾ ಮೇಲೆ ಸಾಫ್ಟ್ ಧೋರಣೆ ತಳೆದ ಎಚ್ ವಿಶ್ವನಾಥ್. 10 ರಿಂದ 12 ವರ್ಷದ ಹಿಂದೆ ಇದು ಆಗಿದ್ದು. ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ ? ಇದು ನಾನು, ಧೃವನಾರಾಯಣ್, ರಮ್ಯ ಎಂಪಿ ಆಗಿದ್ದಾಗ ಆದ ಕೆಲಸ. ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಜನರಿಗೆ ಹೇಳಿ. ಉಂಡವಾಡಿ ಯೋಜನೆಯೂ ಅಷ್ಟೆ ಎಂದು ತಿರುಗೇಟು ನೀಡಿದರು.

ಶಾಸಕ ಜಿ ಟಿ ದೇವೇಗೌಡ ವಿರುದ್ದವೂ ವಾಗ್ದಾಳಿ ನಡೆಸಿದ ವಿಶ್ವನಾಥ್, ಉಂಡುವಾಡಿ ಕುಡಿಯುವ ನೀರು ಯೋಜನೆ ಜಿ ಟಿ ದೇವೇಗೌಡ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು, ನೀವು ಎಲ್ಲಿದ್ದಿರೀ ಮಿಸ್ಟರ್ ಜಿ‌ ಟಿ ದೇವೇಗೌಡ ಎಂದು ಕುಟುಕಿದರು.