ಬೆಂಗಳೂರು ಜಿಲ್ಲಾ ಉಸ್ತುವಾರಿ ಸ್ಥಾನ ಕೈತಪ್ಪಿದ ವಿಚಾರ ಕುರಿತು ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು  ಹೀಗೆ…

ಬೆಂಗಳೂರು,ಸೆ,17,2019(www.justkannada.in): ಬೆಂಗಳೂರು ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಗೊಂದಲ ಇರಲಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಹಿನ್ನಲೆ ಕಂದಾಯ ಸಚಿವ ಆರ್  ಅಶೋಕ್  ನಗರದ  ಕಬ್ಬನ್ ಪಾರ್ಕ್ ನಲ್ಲಿ ಸಾರ್ವಜನಿಕರಿಗೆ ಗಿಡ ಹಂಚುವ ಕಾರ್ಯಕ್ರಮ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.

ಬಳಿಕ  ಬೆಂಗಳೂರು ಉಸ್ತುವಾರಿ ಕೈ ತಪ್ಪಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ  ಏನೂ ಅಂತಾ ಪ್ರಮುಖ ಸ್ಥಾನ ಅಲ್ಲ. ಅದೇನು ಮಂತ್ರಿ ಪದವಿನಾ.? ಬೆಂಗಳೂರು ಉಸ್ತುವಾರಿ  ವಿಚಾರದಲ್ಲಿ ನಮ್ಮ ನಡುವೆ ಗೊಂದಲ ಇರಲಿಲ್ಲ. ನನಗೆ ಇದೇ ಬೇಕು, ಅದೇ ಬೇಕು ಅನ್ನೋ ಪ್ರವೃತ್ತಿ ಇಲ್ಲ. ಹಿಂದೆಯೂ ಕೂಡಾ ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಯಾಗಿ ಕೆಲಸ ಮಾಡಿದ್ದೇನೆ. ಕೆಲಸ ಮಾಡುವವರಿಗೆ ಎಲ್ಲಾದರೇನು.? ನಾನು ಕೆಲಸ ಮಾಡುವವನು ಎಂದರು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಇದು ಸುಪ್ರೀಂ  ಕೋರ್ಟ್ ಗೆ ಸಂಬಂಧ ಪಟ್ಟ ವಿಚಾರ. ನಾನೂ ಈಗಷ್ಟೇ ಮಾದ್ಯಮ ಗಳಲ್ಲಿ ನೋಡಿ ತಿಳಿದುಕೊಂಡೆ. ಆದಷ್ಟು ಬೇಗ ವಿಚಾರಣೆ ನಡೆದು ತೀರ್ಮಾನ ಆಗಲಿ. ನಾವು ಕೂಡಾ ಅನರ್ಹ ಶಾಸಕರ ಜೊತೆ ಇದ್ದೇವೆ. ಅವರ ಭಾವನೆಗಳಿಗೆ ನಮ್ಮ ಸಹಮತ ಇದೆ ಎಂದರು.

ಹಾಗೆಯೇ ನಿನ್ನೆ ಕೂಡಾ ಶಾಸಕರು ನನ್ನ ಭೇಟಿ ಮಾಡಿದ್ರು. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇರೋದ್ರಿಂದಲೇ ನಾವೂ ಉಪಚುನಾವಣೆ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ನ್ಯಾಯಾಲಯದ ತೀರ್ಪು ಬಂದ ನಂತರ ಚುನಾವಣಾ ಪ್ರಕ್ರಿಯೆ ಗಳು ಆರಂಭವಾಗುತ್ತವೆ. ಕೇಸ್ ಇರೋದ್ರಿಂದ ಚುನಾವಣೆ ನಡೆಯುತ್ತೋ ಇಲ್ಲವೋ ಎಂಬ ಸ್ಪಷ್ಟತೆ ಇಲ್ಲ. ತೀರ್ಪು ಬಂದ ನಂತರ  ಚುನಾವಣಾ ಸಿದ್ಧತೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.

Key words: Bangalore- incharge-minister-post-R.Ashok