ಅನುದಾನ ಕಡಿತ : ಯಾವ ಮುಖ ಇಡ್ಕೊಂಡು ವೋಟ್ ಕೇಳ್ತಾರೆ-ಆರ್.ಅಶೋಕ್

ಬಾಗಲಕೋಟೆ, ಏಪ್ರಿಲ್, 4,2026 (www.justkannada.in):   ಹಿಂದುಳಿದ ಜಾತಿಗಳು ಹಾಗೂ ಪರಿಶಿಷ್ಟ ಜಾತಿಗಳ ನಿಗಮಗಳಿಗೆ ಅನುದಾನ ಕಡಿತ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಚುನಾವಣೆಯ ಸಮಯದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತ ಮುಖಂಡರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ಅವರ ಬಳಿ ಮತ ಯಾಚಿಸುತ್ತಿದ್ದಾರೆ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್  ಪ್ರಶ್ನೆ ಮಾಡಿದರು.

ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಹಾಗೂ ಮೂರು ವರ್ಷದಲ್ಲಿ ಮೂವತ್ತು ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಗುತ್ತಿಗೆದಾರರು ಮಾಡಿರುವ 60% ಕಮಿಶನ್ ಆರೋಪ, ಲಿಕ್ಕರ್ ಲಾಬಿ ಮಾಡಿ ಸಚಿವರು ಕೋಟಿಗಟ್ಟಲೆ ಹಣವನ್ನು ದೆಹಲಿಗೆ ಕಳಿಸಿರುವುದು ಸೇರಿದಂತೆ ಮೊದಲಾದ ಹಗರಣ ನಡೆದಿವೆ ಎಂದರು.

ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾಲ್ಕು ಮೆಡಿಕಲ್ ಕಾಲೇಜು ನಿರ್ಮಿಸಲಾಗಿತ್ತು. ಈಗ ಮೆಡಿಕಲ್ ಕಾಲೇಜು ಅಲ್ಲ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನೇ ವರ್ಗಾಯಿಸಲಾಗಿದೆ. ಔಷಧಿ ಪೂರೈಕೆಗೆ ಟೆಂಡರ್ ಕರೆದಿಲ್ಲ. ಕೃಷ್ಣೆಯ ಕಣ್ಣೀರು ಒರೆಸುತ್ತೇನೆಂದು ಹೇಳಿ ಯಾವುದೇ ನೀರಾವರಿ ಯೋಜನೆಗೂ ಹಣ ನೀಡಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅನ್ನ ಕೊಟ್ಟರೆ, ಸಿದ್ದರಾಮಯ್ಯ ಚೀಲ ಕೊಟ್ಟು ಹೆಸರು ಮಾಡುತ್ತಿದ್ದಾರೆ. ಗೃಹಲಕ್ಷ್ಮಿಯ 5,000 ಕೋಟಿ ಹಣವನ್ನು ಎರಡು ತಿಂಗಳಲ್ಲಿ ನೀಡಿಲ್ಲ. ಆ ಹಣ ಎಲ್ಲಿ ಹೋಯಿತು ಎಂದು ಸದನದಲ್ಲಿ ಪ್ರಶ್ನಿಸಿದಾಗ ಉತ್ತರ ನೀಡಿಲ್ಲ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಂಜೋಳ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Key words: Bagalkote, By-election, R. Ashok