ತೀರ್ಪಿನ ಪರ ತಮಗೂ ಸಮ್ಮತವಿದೆ, ಮರು ಪರಿಶೀಲನಾ ಅರ್ಜಿ ಹಾಕಲ್ಲ: ಬಾಬರಿ ಮಸೀದಿ ಪರ ವಾದಿ ಇಕ್ಬಾಲ್ ಅನ್ಸಾರಿ

ನವದೆಹಲಿ, ನವೆಂಬರ್ 09, 2019 (www.justkannada.in): ಅಯೋಧ್ಯೆಯ ರಾಮ ಮಂದಿರ ಹಾಗೂ ಬಾಬರಿ ಮಸೀದಿ ಜಮೀನಿನ ಒಡೆತನದ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲ ಮುಸ್ಲಿಮರೂ ಗೌರವಿಸುತ್ತಾರೆ ಎಂದು ಈ ವ್ಯಾಜ್ಯದಲ್ಲಿ ಬಾಬರಿ ಮಸೀದಿ ಪರ ವಾದಿಗಳಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಪಿನ ಪರ ತಮಗೂ ಸಮ್ಮತವಿದೆ. ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ. ತೀರ್ಪು ಬಂದ ತಕ್ಷಣ ಪ್ರತಿಕ್ರಿಯಿಸಿರುವ ಅವರು, ಸಂತಸ ವ್ಯಕ್ತಪಡಿಸಿದ್ದು, ಕೋರ್ಟ್ ತೀರ್ಪನ್ನು ಗೌರವಿಸುವುದಾಗಿ ಹೇಳಿದ್ದಾರೆ.

40 ದಿನಗಳ ಸತತ ವಿಚಾರಣೆಯ ಬಳಿಕ ಈಗ ಈ ವಿವಾದಕ್ಕೆ ಪರಿಹಾರ ದೊರೆಯುತ್ತಿರುವುದು ಸ್ವಾಗತಾರ್ಹ. ಏನೇ ತೀರ್ಪು ಬಂದರೂ ಅದನ್ನು ಒಪ್ಪುತ್ತೇವೆ. ದೇಶದ ಮುಸಲ್ಮಾನರು ಈ ನೆಲದ ಕಾನೂನನ್ನು ಗೌರವಿಸುತ್ತೇವೆ ಎಂದಿದ್ದಾರಲ್ಲದೆ, ತೀರ್ಪು ಮರುಪರಿಶೀಲನೆಗೆ ಅರ್ಜಿ ಹಾಕುವುದಿಲ್ಲ ಎಂದಿದ್ದಾರೆ.