ನಾಟಕ ಪ್ರದರ್ಶನ ವೇಳೆ ಸ್ಟೇಜ್ ಮೇಲೆಯೇ ಕುಸಿದು ಬಿದ್ದು ಕಲಾವಿದ ಸಾವು.

ವಿಜಯಪುರ,ಸೆಪ್ಟಂಬರ್,15,2023(www.justkannada.in): ನಾಟಕ ಪ್ರದರ್ಶನ ವೇಳೆ ಸ್ಟೇಜ್ ಮೇಲೆಯೇ ಕುಸಿದು ಬಿದ್ದು ಕಲಾವಿದ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾಸ್ಯಪಾತ್ರ ಮಾಡಿದ್ದ ಶರಣು ಬಾಗಲಕೋಟೆ (28) ಮೃತಪಟ್ಟ ಕಲಾವಿದ.

ನಿನ್ನೆ ಕೋಟ್ಯಾಳ ಗ್ರಾಮದಲ್ಲಿ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ಅಂಗವಾಗಿ ನಾಟಕ ಪ್ರದರ್ಶನ ಮಾಡಲಾಗಿತ್ತು. ಈ ನಡುವೆ ನಾಟಕ ಪ್ರದರ್ಶನದ ವೇಳೆಯೇ ಹೃದಯಾಘಾತದಿಂದ ಶರಣು ಬಾಗಲಕೋಟೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಶರಣು ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.  ಮೃತರು ಬಾಗಲಕೋಟೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ  ನಿರ್ವಹಿಸುತ್ತಿದ್ದರು. ಶರಣು ಅವರು ಮೃತಪಟ್ಟ ಕಾರಣ ನಾಟಕ ಪ್ರದರ್ಶನ ರದ್ದುಗೊಳಿಸಲಾಯಿತು.

Key words: Artist -died – collapsing – stage – play -performance