ಭತ್ತದ ಗದ್ದೆಯಲ್ಲಿ ಮೂಡಿದ ಅಪ್ಪು ಚಿತ್ರ: ವಿಶೇಷಚೇತನ ಅಭಿಮಾನಿಯ ವಿಶೇಷ ನಮನ !

ಬೆಂಗಳೂರು, ಅಕ್ಟೋಬರ್ 14, 2023 (www.justkannada.in): ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಪ್ರಯುಕ್ತ ಕರ್ರಿ ಸತ್ಯನಾರಾಯಣ ಎಂಬ ವಿಶೇಷ ಚೇತನ ರೈತ ತಮ್ಮ ನೆಚ್ಚಿನ ನಟನಿಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವಿಡೀಯೋ ಸಾಕಷ್ಟು ವೈರಲ್ ಆಗಿದೆ.

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾದ ಕರ್ರಿ ಸತ್ಯನಾರಾಯಣ ತಮ್ಮ ಆರು ಎಕರೆ ಗದ್ದೆಯಲ್ಲಿ ಎರಡು ಎಕರೆ ಪ್ರದೇಶವನ್ನು ಪುನೀತ್ ಭಾವಚಿತ್ರಕ್ಕಾಗಿಯೇ ಮೀಸಲಿಟ್ಟು ಮೂರು ತಳಿಯ ವಿಶಿಷ್ಟ ಭತ್ತದ ಬೀಜಗಳಿಂದ ಗದ್ದೆ ಬಿತ್ತನೆ ಮಾಡಿದ್ದಾರೆ.

ಗುಜರಾತ್‌ನ ಗ್ರೀನ್ ಗೋಲ್ಡ್ ರೋಸ್, ತೆಲಂಗಾಣದ ಕಾಲಾ ಬಟ್ಟಿ, ಕರ್ನಾಟಕದ ಲೋಕಲ್ ತಳಿಯಾಗಿರುವ ಸೋನಾಮಸೂರಿ ಭತ್ತಗಳ ಒಟ್ಟು 100 ಕೆಜಿ ಬೀಜ ಬಳಸಿ ಭತ್ತ ಬಿತ್ತನೆ ಮಾಡಿದ್ದಾರೆ.

ಪುನೀತ್‌ ಭಾವಚಿತ್ರದಂತೆ ಡಿಸೈನ್‌ ಮಾಡಲಾದ ಭತ್ತದ ಗದ್ದೆಯಲ್ಲಿ ಅಪ್ಪು ಭಾವಚಿತ್ರ ಅರಳಿ ನಿಂತಿದೆ. ವೃತ್ತಿಯಲ್ಲಿ ಚಿತ್ರ ಕಲಾವಿದರಾಗಿರುವ ಸತ್ಯನಾರಾಯಣ ಅವರು ಭತ್ತ ಬಿತ್ತನೆ ಮಾಡುವಾಗಲೇ ಅಪ್ಪು ಭಾವಚಿತ್ರವನ್ನು ಗದ್ದೆಯಲ್ಲಿ ಚಿತ್ರಿಸಿ, ಆ ಪ್ರಕಾರವೇ ಭತ್ತ ನಾಟಿ ಮಾಡಿದ್ದಾರೆ.

ಈ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ರೀತಿ ಮೆಚ್ಚುಗೆ ಹಾಗೂ ಧನ್ಯವಾದ ಸಲ್ಲಿಸಿದ್ದಾರೆ….

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂದು ನಮ್ಮೆಲ್ಲರ ಕೋರಿಕೆ.