ಮೈತ್ರಿ ನಂಬಿ ಮನೆ ಸೇರಿದ ಕೈ ನಾಯಕರು

ಬೆಂಗಳೂರು:ಮೇ-24: ರಾಜ್ಯದಲ್ಲಿ ಆರಂಭದಿಂದಲೂ ಅಪಸ್ವರದ ನಡುವೆಯೇ ಅಧಿಕಾರ ನಡೆಸಿಕೊಂಡು ಹೋಗುತ್ತಿದ್ದ ಮೈತ್ರಿ ಪಕ್ಷಗಳಿಗೆ ಲೋಕಸಭೆ ಚುನಾವಣೆ ಫ‌ಲಿತಾಂಶ ದೊಡ್ಡ ಏಟು ನೀಡಿದ್ದು, ಜೆಡಿಎಸ್‌ ಜೊತೆಗಿನ ಕಾಂಗ್ರೆಸ್‌ ಮೈತ್ರಿಗೆ ಮತದಾರನ ಒಲವು ವ್ಯಕ್ತವಾಗಿಲ್ಲ. ಈ ಫ‌ಲಿತಾಂಶ ಮೈತ್ರಿ ಸರ್ಕಾರದ ಬುಡ ಅಲುಗಾಡಿಸಿದಂತಿದೆ.

ಲೋಕಸಭೆ ಚುನಾವಣೆಯ ದೃಷ್ಟಿಯಿಂದಲೇ ಹೆಕಮಾಂಡ್‌ ಒತ್ತಡದ ಹಿನ್ನೆಲೆಯಲ್ಲಿ ರಚನೆಯಾಗಿ ರುವ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಅನೇಕ ನಾಯಕರು ಆರಂಭದಿಂದಲೂ ಒಲ್ಲದ ಮನಸ್ಸಿನಿಂದಲೇ ಮೈತ್ರಿಯೊಂದಿಗೆ ಮುನ್ನಡೆ ಯು ತ್ತಿದ್ದರು. ಆದರೆ, ಲೋಕಸಭೆಯ ಫ‌ಲಿತಾಂಶ ರಾಜ್ಯದ ಮಟ್ಟಿಗೆ ಹೈ ಕಮಾಂಡ್‌ ನಿರ್ಧಾರ ಕಾಂಗ್ರೆಸ್‌ ಭವಿಷ್ಯದ ದೃಷ್ಠಿಯಿಂದ ಸಮ್ಮತವಲ್ಲ ಎನ್ನುವ ಸಂದೇಶ ಸಾರಿದಂತಿದೆ.

ಇಡೀ ದೇಶದ ಫ‌ಲಿತಾಂಶವನ್ನು ಗಮನಿಸಿದಾಗ ಯಾವುದೇ ಪಕ್ಷದ ಅಭ್ಯರ್ಥಿಗಳು ಲೆಕ್ಕಕ್ಕಿಲ್ಲದಂತಾಗಿದ್ದು, ಕೇವಲ ಪ್ರಧಾನಿ ಮೋದಿ ಅಲೆಯೊಂದೇ ಕೆಲಸ ಮಾಡಿದ್ದು, ರಾಜ್ಯದ ಮಟ್ಟಿಗೂ ಮೋದಿ ಅಲೆ ಕೆಲಸ ಮಾಡಿರುವುದರಿಂದ ಈ ಫ‌ಲಿತಾಂಶಕ್ಕೂ ಅದೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ರಾಜ್ಯದ ಮಟ್ಟಿಗೆ ಗಮನಿದರೆ ಅದರ ಹೊರತಾಗಿಯೂ ಹೀನಾಯ ಸೋಲಿಗೆ ಮೈತ್ರಿಯ ಕೊಡುಗೆ ದೊಡ್ಡದಿದೆ ಎನ್ನುವುದು ಕಾಣಿಸುತ್ತಿದೆ.

ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಜಂಟಿಯಾಗಿ ಹೋಗಲು ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ಇಷ್ಟವಿರಲಿಲ್ಲ. ಸೀಟು ಹಂಚಿಕೆಯ ಪ್ರಕ್ರಿಯೆ ಆರಂಭದಿಂದಲೂ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರು ಫ್ರೆಂಡ್ಲಿ ಫೈಟ್‌ ಮಾಡುವ ಬಗ್ಗೆ ರಾಹುಲ್‌ ಗಾಂಧಿಗೆ ಸಲಹೆಯನ್ನೂ ನೀಡಿದ್ದರೂ, ರಾಹುಲ್‌ ಗಾಂಧಿ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸದೇ ರಾಷ್ಟ್ರ ಮಟ್ಟದ ಲೆಕ್ಕಾಚಾರದಲ್ಲಿಯೇ ರಾಜ್ಯದ ಮೈತ್ರಿಯನ್ನು ತಾಳೆ ಹಾಕಿ ನೋಡಿರುವುದು ರಾಜ್ಯದಲ್ಲಿ ಪಕ್ಷದ ಬುಡವನ್ನೇ ಅಲುಗಾಡಿಸಿದಂತಿದೆ.

ಸೀಟು ಹಂಚಿಕೆಯಲ್ಲಿಯೇ ಗೊಂದಲ: ಸೀಟು ಹಂಚಿಕೆಯ ವಿಷಯದಲ್ಲಿಯೇ ಮೈತ್ರಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಜೆಡಿಎಸ್‌ ತನ್ನ ಶಕ್ತಿಗೆ ಮೀರಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಟ್ಟಾಗಲೂ ರಾಜ್ಯ ಕಾಂಗ್ರೆಸ್‌ ನಾಯಕರು ವಿರೋಧಿಸಿದರೂ, ರಾಹುಲ್‌ ಗಾಂಧಿ ಜೆಡಿಎಸ್‌ನವ ರನ್ನು ಸಮಾಧಾನ ಪಡಿಸಲು 8 ಕ್ಷೇತ್ರಗಳನ್ನು ಬಿಟ್ಟುಕೊ ಡುವ ಮೂಲಕ ಸೋಲುವ ಕ್ಷೇತ್ರಗಳನ್ನು ಚುನಾವ ಣೆಗೂ ಮೊದಲೇ ನಿರ್ಧರಿಸಿಕೊಂಡಂತೆ ಮಾಡಿದರು.

ಮಂಡ್ಯ, ಹಾಸನ, ಶಿವಮೊಗ್ಗ ಹೊರತು ಪಡೆಸಿದರೆ ಬೇರೆ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ಇಲ್ಲ ಎನ್ನುವ ಸತ್ಯ ಜೆಡಿಎಸ್‌ ನಾಯಕರಿಗೆ ಗೊತ್ತಿದ್ದರೂ, ಹಠಕ್ಕೆ ಬಿದ್ದು ತುಮಕೂರು, ವಿಜಯಪುರ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಪಡೆದು ಕೊಂಡಿದ್ದು ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರ ಮುನಿಸಿಗೆ ಕಾರಣವಾಯಿತು. ಕ್ಷೇತ್ರಗಳ ಆಯ್ಕೆ ವಿಷಯದಲ್ಲಿ ಎಲ್ಲವೂ ಜೆಡಿಎಸ್‌ನವರ ಅಣತಿಯಂತೆ ನಡೆದಿದ್ದು, ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅಭ್ಯರ್ಥಿಗಳಿಲ್ಲದಿದ್ದರೂ ತನಗೇ ಕ್ಷೇತ್ರ ಬೇಕು ಎಂದು ಪಟ್ಟು ಹಿಡಿದಿದ್ದು, ಕಾಂಗ್ರೆಸ್‌ನ ಸ್ಥಳೀಯ ನಾಯಕರಿಗೆ ಜೆಡಿಎಸ್‌ ಮೇಲೆ ಮತ್ತಷ್ಟು ಅಸಮಾಧಾನ ಹೆಚ್ಚಾಗಲು ಕಾರಣವಾಯಿತು ಎನಿಸುತ್ತದೆ.

ಮೈಸೂರು ಹಾಗೂ ತುಮಕೂರಿನಲ್ಲಿ ಗೆಲ್ಲುವ ಅಭ್ಯರ್ಥಿಗಿಂತ ನಾಯಕರ ಪ್ರತಿಷ್ಠೆಯೇ ಹೆಚ್ಚಾಗಿದ್ದ ರಿಂದ ಕಾಂಗ್ರೆಸ್‌ ತುಮಕೂರಿನಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪುವಂತೆ ಮಾಡಿಕೊಂಡಿತು. ಮೈಸೂರು ತಮಗೇ ಬೇಕು ಎಂದು ಸಿದ್ದರಾಮಯ್ಯ ಹಿಡಿದ ಹಠಕ್ಕೆ ದೇವೇಗೌಡರೂ ಬಲಿಯಾಗುವಂತಾಗಿರುವುದು ರಾಜಕೀಯ ವೈಚಿತ್ರ್ಯ ಎನ್ನಬಹುದು.

ಚುನಾವಣೆಗೂ ಮೊದಲೇ ನಡೆಸಿದ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿಯೇ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ ಹಾಗೂ ಎಂ.ವೀರಪ್ಪ ಮೊಯ್ಲಿ ಅವರಂಥ ನಾಯಕರು ಸೋಲುತ್ತಾರೆ ಎಂಬ ವರದಿ ಬಂದರೂ, ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳದೇ ಎಲ್ಲ ನಾಯಕರೂ ಪ್ರತಿಷ್ಠೆಯನ್ನೇ ಪಣವಾಗಿಟ್ಟು ಸ್ಪರ್ಧೆಗಿಳಿದಿದ್ದು ಕೂಡ ಅತಿಯಾದ ಆತ್ಮವಿಶ್ವಾದ ಸೂಚನೆ ಎನಿಸುತ್ತದೆ.

ದೋಸ್ತಿ ನಡುವೆ ಅಪನಂಬಿಕೆ
ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವ ಏಕೈಕ ಉದ್ದೇಶದಿಂದ ಮಾಡಿಕೊಂಡ ಮೈತ್ರಿಯಲ್ಲಿ ನಂಬಿಕೆಗಿಂತ ಅಪನಂಬಿಕೆಯೇ ಹೆಚ್ಚು ಕೆಲಸ ಮಾಡಿದಂತಿದೆ. ಆರಂಭದಿಂದಲೂ ಮಂಡ್ಯ, ಹಾಸನ, ತುಮಕೂರು ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವೆಯೂ ಒಮ್ಮತ ಇಲ್ಲದಿರುವುದು ಬಹಿರಂಗವಾಗಿಯೇ ಗೋಚರಿಸಿತ್ತು. ಅದು ಇತರ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವಂತಾಗಿದೆ. 2014 ರಲ್ಲಿ ನರೇಂದ್ರ ಮೋದಿಯವರ ಅಲೆಯ ನಡುವೆಯೇ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಕಾಂಗ್ರೆಸ್‌ನಿಂದ ದೇಶದಲ್ಲಿಯೇ ಅತಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಆದರೆ, ಈ ಬಾರಿ ಮೈತ್ರಿ ಮಾಡಿಕೊಂಡರೂ ಒಂದಂಕಿಯಲ್ಲ, ಒಂದೇ ಒಂದು ಸ್ಥಾನ ಗೆಲ್ಲಿಸಿಕೊಂಡಿರುವುದು ಮೈತ್ರಿಯನ್ನು ಅಣಕಿಸುವಂತಿದೆ.

ಚಿಂತನೆ ಅಗತ್ಯ: ಕಾಂಗ್ರೆಸ್‌ ನಾಯಕರು ರಾಷ್ಟ್ರ ಮಟ್ಟದ ಲೆಕ್ಕಾಚಾರದಲ್ಲಿಯೇ ಮೋದಿ ಅಲೆಯಿಂದ ರಾಜ್ಯದಲ್ಲಿ ಹಿನ್ನಡೆಯಾಗಿದೆ ಎಂದು ಕಾರಣ ಹೇಳಿಕೊಂಡು ಮೈತ್ರಿಯಲ್ಲಿ ಮುಂದುವರೆಯುವ ಕಸರತ್ತು ನಡೆಸಿದರೆ, ಪಕ್ಷ ಮುಳುಗಿದರೂ ಅಧಿಕಾರದಲ್ಲಿರಬೇಕೆಂಬ ನಾಯಕರ ಅಧಿಕಾರ ದಾಹದ ಮನಸ್ಥಿತಿಯನ್ನು ಬಿಂಬಿಸುತ್ತದೆಯೇ ಹೊರತು, ಮುಳುಗುವ ಹಡಗಿನ ಕಿಂಡಿಗಳನ್ನು ಹುಡುಕಿ ಮುಚ್ಚಿ ಪಕ್ಷವನ್ನು ಬಲಗೊಳಿಸುವ ಪ್ರಾಮಾಣಿಕ ಪ್ರಯತ್ನ ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಭವಿಷ್ಯದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುವ ಶಕ್ತಿ ಉಳಿಸಿಕೊಳ್ಳಬೇಕಾದರೆ, ಈಗಿರುವ ಮೈತ್ರಿ ಸರ್ಕಾರದಲ್ಲಿ ಮುಂದುವರೆಯುವ ಬಗ್ಗೆಯೇ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ ಎನಿಸುತ್ತದೆ.
ಕೃಪೆ:ಉದಯವಾಣಿ

ಮೈತ್ರಿ ನಂಬಿ ಮನೆ ಸೇರಿದ ಕೈ ನಾಯಕರು
alliance-contributes-to-the-defeat