ರಾಜ್ಯಕ್ಕೆ ತೆರಿಗೆ ಅನ್ಯಾಯ ಆರೋಪ: ಮೈಸೂರಿನಲ್ಲಿ ಕೇಂದ್ರದ ವಿರುದ್ದ ಆಹೋರಾತ್ರಿ ಧರಣಿ.

ಮೈಸೂರು,ಫೆಬ್ರವರಿ,21,2024(www.justkannada.in):  ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ  ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು  ಆರೋಪಿಸಿ ಇತ್ತೀಚೆಗೆ ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಈ ಬೆನ್ನಲ್ಲೆ ಇದೀಗ  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕರ್ನಾಟಕ ಜನರಂಗ ವೇದಿಕೆಯು ಎರಡು ದಿನಗಳ ಆಹೋರಾತ್ರಿ ಧರಣಿ ಕೈಗೊಂಡಿದೆ.

ಕರ್ನಾಟಕಕ್ಕೆ ಬರಬೇಕಾದ 1.87 ಲಕ್ಷ ಕೋಟಿ ಹಣವನ್ನ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ  ಕರ್ನಾಟಕ ಜನರಂಗ ವೇದಿಕೆಯು ನಗರದ ಚಿಕ್ಕ ಗಡಿಯಾರದ ಬಳಿ ಆಹೋರಾತ್ರಿ ಧರಣಿ ಆರಂಭಿಸಿದೆ.

ಶತತ 48 ಗಂಟೆಗಳ ಶಾಂತಿಯುತ ಆಹೋರಾತ್ರಿ ಧರಣಿಗೆ  ಪ್ರಗತಿಪರ ಚಿಂತಕ ಕೋಟಗಾನಹಳ್ಳಿ ರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನ ಪ್ರಶ್ನಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಧರಣಿಗೆ  ವಿವಿಧ ಕನ್ನಡಪರ, ರೈತಪರ, ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಉರಿ ಬಿಸಲ ನಡುವೆಯಲ್ಲೂ ನೂರಾರು ಪ್ರತಿಭಟನಾಕಾರರು ಜಮಾಯಿಸಿದ್ದು, ಪ್ರತಿಭಟನೆಯಲ್ಲಿ ಮಳವಳ್ಳಿ ಮಾಜಿ ಸಚಿವ ಬಿ.ಸೋಮಶೇಖರ್, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ ಕುಮಾರ್, ಇತಿಹಾಸ ತಜ್ಞ ಪ್ರೊ. ನಂಜರಾಜ ಅರಸ್ ಸೇರಿದಂತೆ ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.

ಇಂದಿನಿಂದ ನಿರಂತರ 48 ಗಂಟೆಗಳ ಕಾಲ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಲಿದ್ದು, ಧರಣಿ ಸತ್ಯಾಗ್ರಹಕ್ಕೆ ಮೈಸೂರಿನ‌ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತೆರಿಗೆ ವಿಚಾರದಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

Key words: Alleging -tax- injustice – state-protest-against – center – Mysore.